ತುಮಕೂರು: ಜನಸಾಮಾನ್ಯರ ಖಾತೆಗೆ ಕನ್ನ ಹಾಕುತ್ತಿದ್ದ ಆನ್ಲೈನ್ ವಂಚಕರು ಪ್ರತಿಷ್ಠಿತರ ಬ್ಯಾಂಕ್ ಖಾತೆಗೂ ಈಗ ಕನ್ನ ಹಾಕಿ ಸಾವಿರಾರು ರೂಪಾಯಿ ದೋಚಿದ್ದಾರೆ.
ಹೀಗೆ, ಆನ್ಲೈನ್ ವಂಚಕರು ಬೀಸಿದ ಜಾಲಕ್ಕೆ ಬಿದ್ದು ಮೋಸ ಹೋದವರು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ಗೌಡ!
ಡಿ.9ರಂದು ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮಕ್ಕೆ ಸುರೇಶ್ಗೌಡ ಭೇಟಿ ನೀಡಿದ್ದರು. ಅವರ ಮೊಬೈಲ್ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ನಿಮ್ಮ ಡೆಬಿಟ್ ಕಾರ್ಡು ಸರಿ ಇದೆಯಾ? ಎಂದು ಕೇಳಿ ಡೆಬಿಟ್ ಕಾರ್ಡ್ ಮಾಹಿತಿ ಪಡೆದುಕೊಂಡಿದ್ದಾನೆ. ಅಲ್ಲದೇ, ಮತ್ತೊಮ್ಮೆ ಪರಿಶೀಲನೆ ಮಾಡಿಕೊಳ್ಳಿ ಎಂದೂ ಹೇಳಿದ್ದಾನೆ. ಬಳಿಕ ನಿಮ್ಮ ಮೊಬೈಲ್ಗೆ ‘ಒಟಿಪಿ’ ಸಂಖ್ಯೆ ಬರುತ್ತದೆ ಕೂಡಲೇ ತಿಳಿಸಿ ಎಂದು ಹೇಳಿದ್ದಾನೆ. ಬಳಿಕ ತಾನೇ ಕರೆ ಮಾಡಿ ಒಟಿಪಿ ಸಂಖ್ಯೆ ಪಡೆದಿದ್ದಾನೆ.
ಸ್ವಲ್ಪ ಹೊತ್ತಿನ ಬಳಿಕ ಮಾಜಿ ಶಾಸಕರು ಬೆಂಗಳೂರಿನ ಕಾರ್ಪೊರೇಷನ್ ಬ್ಯಾಂಕಿನಲ್ಲಿ ಹೊಂದಿರುವ ಖಾತೆಯಲ್ಲಿ ₹ 25 ಸಾವಿರ ಕಡಿತ (ಡ್ರಾ ಆಗಿರುವುದು) ಆಗಿರುವ ಬಗ್ಗೆ ಸಂದೇಶ ಬಂದಿದ್ದು, ಆವಾಗಲೇ ಇದು ವಂಚಕರ ಕೃತ್ಯ ಎಂಬುದು ಗೊತ್ತಾಗಿದೆ. ಬಳಿಕ ಬ್ಯಾಂಕಿಗೆ ತೆರಳಿ ಚರ್ಚಿಸಿ ಬ್ಯಾಂಕ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ತುಮಕೂರು ನಗರ ಠಾಣೆಗೆ ಮಾಜಿ ಶಾಸಕರ ಆಪ್ತ ಕಾರ್ಯದರ್ಶಿ ಪ್ರಭಾಕರ್ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.