ADVERTISEMENT

₹ 772 ಕೋಟಿ ಕಾಮಗಾರಿ:ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಮಾಹಿತಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 10:10 IST
Last Updated 13 ಜೂನ್ 2020, 10:10 IST
ಮಧುಗಿರಿ ಪಟ್ಟಣದ ಪಾವಗಡ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಪುಷ್ಪಾರ್ಚನೆ ಮಾಡಿದರು
ಮಧುಗಿರಿ ಪಟ್ಟಣದ ಪಾವಗಡ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಪುಷ್ಪಾರ್ಚನೆ ಮಾಡಿದರು   

ಮಧುಗಿರಿ: ಜಿಲ್ಲೆಯಲ್ಲಿ ₹ 772 ಕೋಟಿ ವೆಚ್ಚದಲ್ಲಿ 562 ಕಾಮಗಾರಿಗಳು ನಡೆಯುತ್ತಿವೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದರು.

ಪಟ್ಟಣದ ಶಿರಾ ಗೇಟ್ ಸಮೀಪ ₹ 3.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಲೋಕೊಪಯೋಗಿ ಇಲಾಖೆಯ ವಿಭಾಗ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಲಾಕ್‌ಡೌನ್‌ನಲ್ಲಿ ಕಾರ್ಮಿಕರು ಊರಿಗೆ ತೆರಳಿರುವುದರಿಂದ ಕಾಮಗಾರಿಗಳು ವಿಳಂಬವಾಗಿವೆ. ಇನ್ನು ಮುಂದೆ ಕಾಮಗಾರಿಗಳು ವೇಗ ಪಡೆಯಲಿದೆ. ಮಾರ್ಚ್ ಒಳಗಾಗಿ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು.

ADVERTISEMENT

ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ‘ಎತ್ತಿನ ಹೊಳೆ ಯೋಜನೆಯ ಮೂಲಕ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ಹರಿಸಲು ಸರ್ಕಾರ ಬದ್ದವಾಗಿದೆ. ಹೆಚ್ಚುವರಿಯಾಗಿ 12 ಟಿಎಂಸಿ ನೀರು ಹರಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಅದರಂತೆ ಮಧುಗಿರಿ ತಾಲ್ಲೂಕಿಗೆ 3 ಟಿಎಂಸಿ ನೀರು ಹರಿಯುತ್ತದೆ’ ಎಂದರು.

ಕೇಂದ್ರ ಸರ್ಕಾರದಿಂದ ತಾಲ್ಲೂಕಿನ ಕಾಡಗೊಲ್ಲ, ಹಕ್ಕಿ ಪಿಕ್ಕಿ ಸಮುದಾಯಕ್ಕೆ ₹ 8 ಸಾವಿರ ಮನೆ ಮಂಜೂರು ಮಾಡಲಾಗಿದೆ. ಈ ಲೋಕೋಪಯೋಗಿ ಕಚೇರಿಯನ್ನು ಇಬ್ಬರು ಶಾಸಕರು ತಮ್ಮ ಕ್ಷೇತ್ರಗಳಿಗೆ ಮಂಜೂರು ಮಾಡಿಸಿಕೊಳ್ಳಲು ಮುಂದಾದಾಗ ಅಂದಿನ ಶಾಸಕ ಕೆ.ಎನ್. ರಾಜಣ್ಣ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿ ₹ 3.50 ಕೋಟಿ ಮಂಜೂರು ಮಾಡಿಸಿದ್ದರು ಎಂದು ನೆನಪಿಸಿಕೊಂಡರು.

ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ‘ತಾಲ್ಲೂಕು ಬರಗಾಲ ಪೀಡಿತ ಪ್ರದೇಶವಾಗಿದ್ದು, ಹೆಚ್ಚಿನ ಅನುದಾನ ನೀಡಿ’ ಎಂದು ಉಪಮುಖ್ಯಮಂತ್ರಿಗೆ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೆ.ಎ. ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್, ಅಧ್ಯಕ್ಷೆ ಲತಾ ರವಿಕುಮಾರ್, ಉಪವಿಭಾಗಾಧಿಕಾರಿ ಡಾ.ಕೆ. ನಂದಿನಿ, ತಹಶೀಲ್ದಾರ್ ಡಾ.ಜಿ. ವಿಶ್ವನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ದೊಡ್ಡಸಿದ್ದಪ್ಪ, ತಾ.ಪಂ. ಅಧ್ಯಕ್ಷೆ ಇಂದಿರಾ,ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳಾದ ದುರಗಪ್ಪ, ವಿರೂಪಾಕ್ಷಯ್ಯ, ಹೊನ್ನೇಶಪ್ಪ, ಪುರಸಭೆ ಸದಸ್ಯರಾದ ಎಂ.ಎಸ್. ಚಂದ್ರಶೇಖರ್ ಬಾಬು, ಎಂ.ಆರ್.ಜಗನ್ನಾಥ, ಎಂ.ಎಲ್.ಗಂಗರಾಜು, ನರಸಿಂಹಮೂರ್ತಿ, ಎಂಜಿನಿಯರ್ ರಮೇಶ್, ಗಂಗಾಧರ್, ರಾಜಗೋಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.