ADVERTISEMENT

ಚಿಕಿತ್ಸೆ ಸಿಗದೆ ತಾಯಿ ಮತ್ತು ಅವಳಿ ಶಿಶುಗಳ ಸಾವು: ಮಕ್ಕಳ ರಕ್ಷಣಾ ಆಯೋಗ ಭೇಟಿ

ತಾಯಿ ಮತ್ತು ಅವಳಿ ಶಿಶು ಮರಣ ಪ್ರಕರಣ: ತುಮಕೂರು ಜಿಲ್ಲಾಸ್ಪತ್ರೆಯ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 21:12 IST
Last Updated 4 ನವೆಂಬರ್ 2022, 21:12 IST
ತುಮಕೂರು ಜಿಲ್ಲಾ ಆಸ್ಪತ್ರೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಸರ್ಜನ್ ಡಾ.ವೀಣಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಧರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರಾ ಇತರರು ಇದ್ದರು
ತುಮಕೂರು ಜಿಲ್ಲಾ ಆಸ್ಪತ್ರೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಸರ್ಜನ್ ಡಾ.ವೀಣಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಧರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರಾ ಇತರರು ಇದ್ದರು   

ತುಮಕೂರು: ಚಿಕಿತ್ಸೆ ಸಿಗದೆ ತಾಯಿ ಮತ್ತು ಅವಳಿ ಶಿಶುಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು ವೈದ್ಯರು, ಸಿಬ್ಬಂದಿ, ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಮತ್ತೆ ಇಂತಹ ಘಟನೆ ನಡೆಯದಂತೆ ನೋಡಿ ಕೊಳ್ಳಬೇಕು. ವೈದ್ಯರು ಹಾಗೂ ಪ್ರಮುಖರ ಜತೆಗೆ ವಾರಕ್ಕೆ ಒಮ್ಮೆ ಸಭೆ ನಡೆಸಿ ಆಸ್ಪತ್ರೆ ಆಡಳಿತ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವಂತೆ ಜಿಲ್ಲಾ ವೈದ್ಯಾಧಿಕಾರಿಗೆ ಸೂಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಘಟನೆ ಕುರಿತು ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗಕ್ಕೂ ಮಾಹಿತಿ ನೀಡಲಾಗಿದೆ. ಆಸ್ಪತ್ರೆಗೆ ಬಂದ ಗರ್ಭಿಣಿಗೆ ವೈದ್ಯರು ಚಿಕಿತ್ಸೆ ನೀಡದೆ ಇಡೀ ಸಮಾಜ ತಲೆತಗ್ಗಿಸುವಂತಾಗಿದೆ’ ಎಂದು ವಿಷಾದಿಸಿದರು.

ADVERTISEMENT

ಗುರುವಾರ ರಾತ್ರಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಆಸ್ಪತ್ರೆಗೆ ಭೇಟಿ ನೀಡಿ, ಅಧಿಕಾರಿಗಳ ಜತೆ ತುರ್ತುಸಭೆ ನಡೆಸಿದರು.

ನಗರದಲ್ಲೇ ಶವ ಸಂಸ್ಕಾರ: ಮೃತ ಮಹಿಳೆ ಕಸ್ತೂರಿ ಶವದ ಮರಣೋತ್ತರ ಪರೀಕ್ಷೆಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಮಾಡ ಲಾಯಿತು. ತಮಿಳುನಾಡಿನಿಂದ ಬಂದಿದ್ದ ಅವರ ಸಂಬಂಧಿಕರು ನಗರದಲ್ಲೇ ಶವ ಸಂಸ್ಕಾರ ನೆರವೇರಿಸಿದರು. ನಗರದ ಬಾಲಕಿಯರ ಬಾಲಮಂದಿರದಲ್ಲಿ ಬಾಲಕಿಗೆ ಆಶ್ರಯ ನೀಡಲಾಗಿದೆ.

ಸಾಕ್ಷಿ ಹೇಳಿದ್ದ ಮಹಿಳೆಗೆ ಬೆದರಿಕೆ

ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಭಾರತಿನಗರದ ಸರೋಜಮ್ಮ ಅವರಿಗೆ ಪೊಲೀಸರ ಮೂಲಕ ಬೆದರಿಸುವ ಕೆಲಸ ನಡೆದಿದೆ.

‘ಯಾರಿಗೂ ಯಾವುದೇ ಹೇಳಿಕೆ ನೀಡಬಾರದು. ತನಿಖೆಗೆ ಬರುವ ತಂಡಕ್ಕೂ ಮಾಹಿತಿ ಕೊಡಬಾರದು. ನನಗೆ ಏನೂ ಗೊತ್ತಿಲ್ಲ ಎಂದಷ್ಟೇ ಹೇಳಬೇಕು. ಏನಾದರೂ ಹೇಳಿದರೆ ನೀನೇ ಹೆರಿಗೆ ಮಾಡಿಸಿ, ಕೊಲೆ ಮಾಡಿದ್ದೀಯಾ ಎಂದು ನಿನ್ನ ವಿರುದ್ಧವೇ ಪ್ರಕರಣ ದಾಖಲಿಸಲಾಗುವುದು’ ಎಂದು ಕೆಲವು ಪೊಲೀಸರ ಮೂಲಕ ಒತ್ತಡ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.