ಕೊರಟಗೆರೆ: ಸಮುದಾಯ ಮುನ್ನೆಲೆಗೆ ಬರಬೇಕಾದರೆ ಆ ಸಮುದಾಯದ ಮಕ್ಕಳು ವಿದ್ಯಾವಂತರಾಗಬೇಕು ಎಂದು ಮಡಿವಾಳ ಯುವ ವೇದಿಕೆ ಅಧ್ಯಕ್ಷ ಕಾಂತರಾಜು ಹೇಳಿದರು.
ಪಟ್ಟಣದಲ್ಲಿ ಮಡಿವಾಳ ವೇದಿಕೆ ಹಾಗೂ ಮಡಿವಾಳ ಮಲ್ಲಿಗಮ್ಮ ಸೇವಾ ಟ್ರಸ್ಟ್ನಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಡಿವಾಳ ಸಮುದಾಯ ಅತ್ಯಂತ ಹಿಂದುಳಿದಿದ್ದು, ಈ ಸಮುದಾಯ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಮಕ್ಕಳು ಕಡ್ಡಾಯವಾಗಿ ವಿದ್ಯಾವಂತಗಬೇಕು. ಆಗ ಎಲ್ಲ ರೀತಿಯ ಪ್ರೋತ್ಸಾಹ ಇತರೆ ಸೌಲಭ್ಯಗಳು ದೊರೆಯುತ್ತವೆ ಎಂದರು.
ಮಡಿವಾಳ ಸಮುದಾಯ ಅತ್ಯಂತ ಹಿಂದುಳಿದಿದೆ. ಸರಿಯಾದ ಸೌಲಭ್ಯ, ಸೂಕ್ತ ಸ್ಥಾನಮಾನ ದೊರೆತಿಲ್ಲ. ಇದರಿಂದ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದರ ಜೊತೆಗೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು.
ಮಡಿವಾಳ ಮಲ್ಲಿಗಮ್ಮ ಸೇವಾ ಟ್ರಸ್ಟ್ ಕಾರ್ಯದರ್ಶಿ ತೊಳಸಮ್ಮ ಮಾತನಾಡಿ, ಸಮಾಜಕ್ಕೆ ಮಡಿವಾಳ ಜನಾಂಗ ಅನೇಕ ಕೊಡುಗೆಗಳನ್ನು ನೀಡಿದೆ. ಮಡಿವಾಳ ಸಮುದಾಯಕ್ಕೆ ನಿಗಮ ಮಂಡಳಿ ಸ್ಥಾಪಿಸಬೇಕು ಎಂದರು.
ತಾಲ್ಲೂಕು ಮಡಿವಾಳ ಸಂಘದ ಗೌರವ ಅಧ್ಯಕ್ಷ ಹಾಗೂ ಬಗರ್ ಹುಕ್ಕುಂ ಕಮಿಟಿ ಸದಸ್ಯ ಸಿ.ರಂಗಯ್ಯ ಮಾತನಾಡಿ, ಜನಾಂಗವು ಸಮಾಜದಲ್ಲಿ ಶಕ್ತಿ ಹೊಂದಬೇಕಾದರೆ ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಢರಾಗಬೇಕು. ಹಿಂದುಳಿದ ವರ್ಗದಲ್ಲಿ ಪ್ರಬಲ ಸಮುದಾಯಗಳು ಮಡಿವಾಳ ಜನಾಂಗವನ್ನು ಮುಂದುವರೆಯಲು ಬಿಡುತ್ತಿಲ್ಲ ಎಂದರು.
ನಿವೃತ್ತ ಶಿಕ್ಷಕ ಕೃಷ್ಣಪ್ಪ ಮಾತನಾಡಿ, ನಮ್ಮ ಮೂಲ ವೃತ್ತಿ ಇಲ್ಲವಾಗುತ್ತಿದೆ ಎಂದರು.
ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾದ ಸಮುದಾಯದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಗೌರವಾಧ್ಯಕ್ಷ ಅಶ್ವತ್ಥಪ್ಪ, ಟ್ರಸ್ಟ್ ಅಧ್ಯಕ್ಷೆ ಉಮಾದೇವಿ, ಶಿಕ್ಷಕಿ ವಿಶಾಲಕ್ಷಮ್ಮ, ಯುವ ವೇದಿಕೆಯ ಸತೀಶ್, ನವೀನ್ಕುಮಾರ್, ಪಾಂಡುವರ್ದನ್, ಶರತ್, ಮಹೇಶ್, ರಾಜೇಶ್, ಮಂಜುನಾಥ್, ಗಿರೀಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.