ADVERTISEMENT

ರಂಗಗೀತೆಗೆ ಜೀವ ತುಂಬುವ ಮೇಷ್ಟ್ರು

12 ವರ್ಷಗಳಿಂದ ರಂಗಭೂಮಿ ನಂಟು; ಅಭಿನಯ, ನಿರ್ದೇಶನ, ಸಂಗೀತದಲ್ಲೂ ಸಕ್ರಿಯರು ಜಗದೀಶ್‌

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 10:28 IST
Last Updated 21 ಡಿಸೆಂಬರ್ 2019, 10:28 IST
ಎಂ.ಎಸ್.ಜಗದೀಶ್
ಎಂ.ಎಸ್.ಜಗದೀಶ್   

ಕುಣಿಗಲ್: ‘ಕುರುಕ್ಷೇತ್ರದ ಹಾರ್ಮೋನಿಯಂ ಮೇಷ್ಟ್ರು’ ಎಂದೇ ಖ್ಯಾತಿಗಳಿಸಿರುವವರು ತಾಲ್ಲೂಕಿನ ಹುಲಿಯೂರುದುರ್ಗ ಶೃಂಗಾರಸಾಗರದ ಎಂ.ಎಸ್‌. ಜಗದೀಶ್‌. 29ನೇ ವಯಸ್ಸಿಗೆ 129 ನಾಟಕಗಳಿಗೆ ಹಾರ್ಮೋನಿಯಂ ನುಡಿಸಿ, ರಂಗ ಸಂಗೀತಕ್ಕೆ ಜೀವ ತುಂಬಿದ್ದಾರೆ.

16ನೇ ವಯಸ್ಸಿನಿಂದಲೇ ಸೋದರ ಮಾವ ಎಸ್.ಆರ್.ಪುಟ್ಟರಾಜು ಗರಡಿಯಲ್ಲಿ ಪಳಗಿ 12 ವರ್ಷ ನಿರಂತರವಾಗಿ ಕುರುಕ್ಷೇತ್ರ, ರಾಮಾಯಣ, ಮಹಾಭಾರತ ನಾಟಕಗಳನ್ನು ಕಲಿಸುತ್ತಲೇ ರಂಗಭೂಮಿ ಕಲಾವಿದರಿಂದ ಗೌರವಕ್ಕೆ ಪಾತ್ರರಾಗಿದ್ದಾರೆ.

ಜಗದೀಶ್‌, ರಂಗಭೂಮಿಗೆ ಅನೇಕ ಕಲಾವಿದರನ್ನು ಪರಿಚಯಿಸಿ ಅವರಲ್ಲಿನ ಅಭಿನಯಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.

ADVERTISEMENT

ಜಗದೀಶ್ ಪ್ರೌಢ ಶಿಕ್ಷಣದ ನಂತರ ಹಾರ್ಮೋನಿಯಂ ತರಬೇತಿ ಪಡೆದರು. ನಾಟಕ ಅಭಿನಯ, ನಿರ್ದೇಶನ, ಸಂಭಾಷಣೆ ಮತ್ತು ಕಂದಪದ್ಯಗಳ ಗಾಯನದಲ್ಲೂ ಪರಿಣತಿ ಗಳಿಸಿದ್ದಾರೆ. ಮೊದಲ ಬಾರಿಗೆ ಗೊಲ್ಲರ ಹಟ್ಟಿಯ ಕೃಷ್ಣ ಕಲಾಭಿಮಾನಿಗಳ ಸಂಘದ ಆಶ್ರಯದಲ್ಲಿ ಕುರುಕೇತ್ರ ನಾಟಕ ನಿರ್ದೇಶಿಸಿದ್ದಾರೆ.

ಕೃಷ್ಣ, ಅಭಿಮನ್ಯು ಮತ್ತು ಧರ್ಮರಾಯನ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕ ನಟನೆಯಲ್ಲೂ ತಮ್ಮ ಪಾಂಡಿತ್ಯ ಪ್ರದರ್ಶಿಸಿದ್ದಾರೆ. ಕುಣಿಗಲ್, ರಾಮನಗರ, ಚನ್ನಪಟ್ಟಣ, ಮಾಗಡಿ, ಬೆಂಗಳೂರಿನಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಹುಲಿಯೂರುದುರ್ಗ ಮಾರುತಿ ಕಲಾಭಿಮಾನಿಗಳ ಸಂಘ ಇವರಿಗೆ ‘ರಂಗತಿಲಕ’ ಎಂಬ ಬಿರುದು ನೀಡಿ ಸನ್ಮಾನಿಸಿದೆ.

***

25ರಂದು ಪೊಲೀಸರಿಂದ ಕುರುಕ್ಷೇತ್ರ

ಕುಣಿಗಲ್ ತಾಲ್ಲೂಕಿನ ಪೊಲೀಸರು ಡಿ.25ರಂದು ‘ಕುರುಕ್ಷೇತ್ರ’ ನಾಟಕ ಪ್ರದರ್ಶಿಸುವರು. ಜಗದೀಶ್, ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡುತ್ತಿದ್ದಾರೆ. ಕಾನೂನು, ಶಾಂತಿ, ಸುವ್ಯವಸ್ಥೆ, ಒತ್ತಡಗಳ ನಡುವೆ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ರಂಗಭೂಮಿಯ ಕಂದಪದ್ಯಗಳನ್ನು ಸುಶ್ರಾವ್ಯವಾಗಿ ಹಾಡುವುದನ್ನು, ಪಾತ್ರಗಳಿಗೆ ತಕ್ಕ ಭಾವಾಭಿನಯವನ್ನು ಕಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.