ಪ್ರಾತಿನಿಧಿಕ ಚಿತ್ರ
ಪಾವಗಡ: ತಾಲ್ಲೂಕಿನ ಬೂದಿಬೆಟ್ಟ ಗ್ರಾಮ ಪಂಚಾಯಿತಿಯ ಯರ್ರಮ್ಮನಹಳ್ಳಿ ಕೆರೆಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡಿದ್ದ ಕೂಲಿಕಾರ್ಮಿಕರಿಗೆ ಪೂರ್ತಿ ಕೂಲಿ ಪಾವತಿಸಿಲ್ಲ, ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿ ಕೂಲಿಕಾರ್ಮಿಕರು ಬುಧವಾರ ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಜೂನ್ನಲ್ಲಿ ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆ ಅಡಿಯಲ್ಲಿ ಎರ್ರಮ್ಮನಹಳ್ಳಿ ಕೆರೆಯಲ್ಲಿ 7 ದಿನ ಕೆಲಸ ಮಾಡಲಾಗಿತ್ತು. ಆದರೆ 5 ದಿನದ ಕೂಲಿಯನ್ನು ಮಾತ್ರ ನೀಡಲಾಗಿದೆ. ದಿನಕ್ಕೆ ₹370 ಕೂಲಿ ಹಾಕುವ ಬದಲು ₹190 ಮಾತ್ರ ನೀಡಲಾಗಿದೆ ಎಂದು ಪ್ರತಿಭಟನೆ ನಿರತರು ಆರೋಪಿಸಿದರು.
ಒಂದು ವಾರದ ನಂತರ ಕೆಲಸ ಮಾಡುವುದಕ್ಕೆ ಎನ್ಎಂಆರ್ ನೀಡದೆ, ಬೂದಿ ಬೆಟ್ಟ ಎತ್ತಿನಹಳ್ಳಿ ರಂಗಯ್ಯನರೊಪ್ಪ ಕೂಲಿ ಕಾರ್ಮಿಕರಿಗೆ ಅನ್ಯಾಯ ಮಾಡಲಾಗುತ್ತಿದೆ. ಈಗಾಗಲೇ ಕೆಲಸ ಮಾಡಿದ ಹಣವನ್ನೂ ಖಾತೆಗೆ ಹಾಕದ ಕಾರಣ ಜೀವನ ನಿರ್ವಣೆಗೆ ಸಮಸ್ಯೆಯಾಗುತ್ತಿದೆ ಎಂದು ಪ್ರತಿಬಟನೆ ನಿರತರು ದೂರಿದರು.
ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ತಮಗೆ ಕೆಲಸ ನೀಡಬೇಕು. ಸಂಪೂರ್ಣ ಕೂಲಿ ಮೊತ್ತವನ್ನು ಜಮೆ ಮಾಡಬೇಕು ಎಂದು ಒತ್ತಾಯಿಸಿದರು. ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ರಾಮಣ್ಣ, ಸಿದ್ದೇಶ್, ಶ್ರೀನಿವಾಸಲು, ರಾಧಮ್ಮ, ಲಕ್ಷ್ಮೀದೇವಿ, ಮಮತಾ, ಸುಶೀಲ, ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.