ADVERTISEMENT

ದುರ್ಗಮ್ಮ ದೇವಿ ದ್ವಾರ ತೆರವು

ಮಹಾನಗರ ಪಾಲಿಕೆ ಆಯುಕ್ತರ ಬಹಿರಂಗ ಕ್ಷಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 2:12 IST
Last Updated 5 ಏಪ್ರಿಲ್ 2021, 2:12 IST
ದುರ್ಗಮ್ಮದೇವಿ ಮುಖ್ಯದ್ವಾರ ತೆರವುಗೊಳಿಸಿರುವುದನ್ನು ವಿರೋಧಿಸಿ ಸಭೆ ನಡೆಯಿತು
ದುರ್ಗಮ್ಮದೇವಿ ಮುಖ್ಯದ್ವಾರ ತೆರವುಗೊಳಿಸಿರುವುದನ್ನು ವಿರೋಧಿಸಿ ಸಭೆ ನಡೆಯಿತು   

ತುಮಕೂರು: ಎನ್.ಆರ್. ಕಾಲೊನಿ ದುರ್ಗಮ್ಮದೇವಿಮುಖ್ಯದ್ವಾರ ತೆರವುಗೊಳಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.

ಮುಖ್ಯದ್ವಾರತೆರವಿನ ಸಂಬಂಧ ಭಾನುವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಈ ಒತ್ತಾಯ ಮಾಡಲಾಯಿತು.

ಆಯುಕ್ತರ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆಡಳಿತ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗಕ್ಕೆ ದೂರು ನೀಡಲು ನಿರ್ಧರಿಸಲಾಯಿತು. ಎನ್.ಆರ್. ಕಾಲೊನಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದರಿಂದ ಆಯುಕ್ತರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದುಆಗ್ರಹಿಸಲಾಯಿತು.

ADVERTISEMENT

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹನುಮಂತಪುರದ ಕೊಲ್ಲಾಪುರದಮ್ಮ ದೇವಸ್ಥಾನದಿಂದ ತಮ್ಮಯ್ಯ ಆಸ್ಪತ್ರೆವರೆಗೆ 95 ಅಡಿ ರಸ್ತೆ, ತಮ್ಮಯ್ಯ ಆಸ್ಪತ್ರೆಯಿಂದ ಕೋತಿತೋಪಿನವರೆಗೆ 75 ಅಡಿ ರಸ್ತೆ ವಿಸ್ತರಣೆಗೆ ಈ ಹಿಂದೆ ನಡೆದ ನಾಗರಿಕರ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಜಿಲ್ಲೆಯಲ್ಲಿಪರಿಶಿಷ್ಟ ಜಾತಿಯವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಎನ್.ಆರ್. ಕಾಲೊನಿಯ ಕುಲದೇವತೆ ದುರ್ಗಮ್ಮ ದೇವಿಯಮುಖ್ಯದ್ವಾರವನ್ನು ಬಿಟ್ಟು ರಸ್ತೆ ಅಭಿವೃದ್ಧಿ ಮಾಡುವ ಬಗ್ಗೆ ಅಧಿಕಾರಿಗಳು ಅಂದಿನ ಸಭೆಯಲ್ಲಿ ಭರವಸೆ ನೀಡಿದ್ದರು. ಆದರೆ, ಈಗ ಏಕಾಏಕಿ ನಗರ ಪಾಲಿಕೆ ಅಧಿಕಾರಿಗಳುಕೆಡವಿಹಾಕಿದ್ದಾರೆ ಎಂದು ಕಿಡಿಕಾರಿದರು.

ಚಿಂತಕ ಕೆ. ದೊರೈರಾಜ್, ‘ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ದಲಿತರು ವಾಸಿಸುವ ಪ್ರದೇಶಗಳಿಗೆ ಸೌಲಭ್ಯ ಕಲ್ಪಿಸಲು ಹಣ ನೀಡದೆ ತಾರತಮ್ಯ ಮಾಡಲಾಗಿದೆ. ಎಂ.ಜಿ. ರಸ್ತೆ, ಮಂಡಿಪೇಟೆ, ಜೆ.ಸಿ. ರಸ್ತೆ, ಚಾಮುಂಡಿ ದೇವಸ್ಥಾನ ರಸ್ತೆ ವಿಸ್ತರಣೆಗೆ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಪರಿಶಿಷ್ಟರು ವಾಸಿಸುವ ಎನ್.ಆರ್. ಕಾಲೊನಿಯ ದುರ್ಗಮ್ಮ ದೇವಿಯಮುಖ್ಯದ್ವಾರ ಧ್ವಂಸಗೊಳಿಸಿರುವ ಕ್ರಮ ಪಾಲಿಕೆಯ ಆಯುಕ್ತರ ಜಾತಿ ಮನಸ್ಥಿತಿಯನ್ನು ತೋರುತ್ತದೆ. ಜಿಲ್ಲಾ ಆಡಳಿತದ ಜಾತಿ ತಾರತಮ್ಯವನ್ನು ಬಹಿರಂಗಗೊಳಿಸುತ್ತದೆ’ ಎಂದು ಅಸಮಾಧಾನವ್ಯಕ್ತಪಡಿಸಿದರು.

ಶಾಸಕರು, ಪಾಲಿಕೆ ಸ್ಥಳೀಯ ಸದಸ್ಯರು, ಸ್ಥಳೀಯ ನಾಗರಿಕ ಮುಖಂಡರ ಗಮನಕ್ಕೆ ತರದೇ ಏಕಾಏಕಿ ತೆರವುಗೊಳಿಸಿರುವ ಕ್ರಮ ಪರಿಶಿಷ್ಟರ ಧಾರ್ಮಿಕ ಭಾವನೆಗಳಿಗೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತರುವ ನಡೆಯಾಗಿದೆ. ಮುಖ್ಯದ್ವಾರವನ್ನು ಒಂದು ತಿಂಗಳಲ್ಲಿ ನಿರ್ಮಿಸಿಕೊಡದಿದ್ದರೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಮುಖಂಡರಾದ ವಾಲೇ ಚಂದ್ರಯ್ಯ, ಜಯಮೂರ್ತಿ, ದುರ್ಗಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಎ. ನರಸಿಂಹಮೂರ್ತಿ, ಟಿ.ಕೆ. ನರಸಿಂಹಮೂರ್ತಿ, ಮಲ್ಲಿಕಾರ್ಜುನಯ್ಯ, ಬಿ. ಆಂಜನ್‍ ಮೂರ್ತಿ, ಶೆಟ್ಟಾಳಯ್ಯ, ಎನ್. ರಾಜಣ್ಣ, ಗಂಗಾಧರ್, ಚಂದ್ರಯ್ಯ, ಕಿರಣ್‍ಕುಮಾರ್, ಕಿಶೋರ್, ಕೆಂಪರಾಜು, ಮೋಹನ್ ದುರ್ಗಾಂಬ, ಯಜಮಾನ್ ಹನುಮನರಸಿಂಹಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.