ಗುಬ್ಬಿ: ತಾಲ್ಲೂಕು ಚುನಾವಣಾ ಶಾಖೆಯು ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ನೇಮಕ ಮಾಡಿಕೊಂಡ ಸಿಬ್ಬಂದಿಯೊಬ್ಬರಿಗೆ ನಿಯಮಬದ್ಧವಾಗಿ ನೀಡಬೇಕಾದ ಮತದಾನದ ಹಕ್ಕನ್ನು ಕಸಿದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಗುಬ್ಬಿ ಪಟ್ಟಣದ ನಿವಾಸಿ, ಇದೇ ತಾಲ್ಲೂಕಿನಲ್ಲಿ ಶಿಕ್ಷಕರಾಗಿರುವ ಎಚ್.ಎನ್.ದೇವರಾಜು ಚುನಾವಣಾ ಕರ್ತವ್ಯಕ್ಕಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ (ಶಿರಾ) ಗುಬ್ಬಿಯಿಂದ ನೇಮಕಗೊಂಡಿದ್ದರು. ಇಲ್ಲಿಗೆ ಕರ್ತವ್ಯಕ್ಕೆ ತೆರಳುವ ಮುನ್ನ ಅಂಚೆ ಮತಕ್ಕಾಗಿ ಅರ್ಜಿ ಹಾಕಿದ್ದರು. ಆದರೆ, ಅಂಚೆ ಮತ ಪತ್ರಕ್ಕೆ (ಪೋಸ್ಟಲ್ ಬ್ಯಾಲೆಟ್) ಬದಲು ಚುನಾವಣಾ ಕರ್ತವ್ಯ ಪ್ರಮಾಣ ಪತ್ರವನ್ನು (ಇಡಿಸಿ) ಅಂಚೆ ಮೂಲಕ ಕಳುಹಿಸಿದ್ದಾರೆ.
ಮತದಾನ ನಡೆದ (ಏ.18) ಮರುದಿನ ಮನೆಗೆ ಬಂದು ಅಂಚೆ ಮೂಲಕ ಬಂದ ಚುನಾವಣಾ ಲಕೋಟೆ ತೆರೆದು ನೋಡಿದಾಗ, ಅಂಚೆ ಮತ ಪತ್ರಕ್ಕೆ ಬದಲು ಇಡಿಸಿ ಕಳಿಸಿರುವುದು ಶಿಕ್ಷಕರ ಗಮನಕ್ಕೆ ಬಂದಿದೆ. ಇದನ್ನು ಸಂಬಂಧಿಸಿದವರಲ್ಲಿ ಪ್ರಶ್ನಿಸಿದ್ದಕ್ಕೆ ‘ನೀವು ಆದೇಶ ಪ್ರತಿಯನ್ನೇ ಹಾಕಿಲ್ಲ’ ಎಂದು ಚುನಾವಣಾ ಸಿಬ್ಬಂದಿ ಹೇಳಿದ್ದಾರೆ. ಹಾಗಾದರೆ ‘ಈಡಿಸಿ ಯಾವ ಆಧಾರದ ಮೇಲೆ ಕಳಿಸಿದ್ದೀರಿ’ ಎಂದು ಕೇಳಿದ್ದಕ್ಕೆ ಚುನಾವಣಾ ಇಲಾಖೆಯಿಂದ ಸೂಕ್ತ ಉತ್ತರ ಸಿಕ್ಕಿಲ್ಲ.
‘ನಿಮ್ಮ ತಪ್ಪನ್ನು ಬದಿಗಿಟ್ಟು, ಈಗಲಾದರೂ ನನಗೆ ಮತದಾನ ಮಾಡಲು ಪೋಸ್ಟಲ್ ಬ್ಯಾಲೆಟ್ ನೀಡಿ’ ಎಂದು ಗುಬ್ಬಿ ತಹಶೀಲ್ದಾರ್ ಬಳಿ ಅಂಗಲಾಚಿದರೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಈಗಲೂ ಕಾಲ ಮಿಂಚಿಲ್ಲ. ಮತ ಎಣಿಕೆ ಹಿಂದಿನ ದಿನ (ಏ.22)ದವರೆಗೆ ಅಂಚೆ ಮತಕ್ಕೆ ಅವಕಾಶ ಇದೆ. ದಯವಿಟ್ಟು ನನಗೆ ಮತದಾನದ ಹಕ್ಕು ನೀಡಿ’ ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇನೆ ಎಂದು ದೇವರಾಜು ತಿಳಿಸಿದರು.
‘ಚುನಾವಣಾ ಅಧಿಕಾರಿಗಳು ಮಾಡಿದ ಸಣ್ಣ ಎಡವಟ್ಟಿನಿಂದ ಚುನಾವಣಾ ಕಾರ್ಯದಲ್ಲಿ ಭಾಗಿಯಾದ ನೌಕರರು ಮತದಾನ ವಂಚಿದರಾದರೆ ತಪ್ಪಿನ ಹೊಣೆ ಹೊರುವವರು ಯಾರು? ನಾವು ಕೇಳಿದ ಅಂಚೆ ಮತಕ್ಕೆ ಬದಲು ಈಡಿಸಿ ಕೊಟ್ಟದ್ದು ಅಧಿಕಾರಿಗಳ ತಪ್ಪಲ್ಲವೇ’ ಎಂದು ಪ್ರಶ್ನಿಸುತ್ತಾರೆ ಶಿಕ್ಷಕರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.