ADVERTISEMENT

ರೈತರ ವಸ್ತು ವಿನಿಮಯ ಕಾರ್ಯಕ್ರಮ

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ರೈತ ಮುಖಂಡರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 5:43 IST
Last Updated 28 ಮಾರ್ಚ್ 2023, 5:43 IST
ಹೊಳಲ್ಕೆರೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಿಕ್ಕನಾಯಕನಹಳ್ಳಿಯಿಂದ ತಾಲ್ಲೂಕು ರೈತ ಸಂಘದ ಕಾರ್ಯಕರ್ತರು ತೆರಳಿದರು
ಹೊಳಲ್ಕೆರೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಿಕ್ಕನಾಯಕನಹಳ್ಳಿಯಿಂದ ತಾಲ್ಲೂಕು ರೈತ ಸಂಘದ ಕಾರ್ಯಕರ್ತರು ತೆರಳಿದರು   

ಚಿಕ್ಕನಾಯಕನಹಳ್ಳಿ: ‘ತಾನು ಬೆಳೆದ ಬೆಳೆಗಳಿಗೆ ತಾನೇ ಬೆಲೆ ನಿಗದಿ ಮಾಡುವ ಕಾಲ ಬಾರದ ಹೊರತು ರೈತನ ಏಳಿಗೆ ಸಾಧ್ಯವಿಲ್ಲ’ ಎಂದು ವಕೀಲ ಶ್ರೀಧರ್‌ ಅಭಿಪ್ರಾಯಪಟ್ಟರು.

ಬ್ಯಾಂಕ್‌ಗಳ ಸಾಲ, ವಿದ್ಯುತ್‌ ಬಾಕಿ ಹಾಗೂ ಸರ್ಕಾರದ ವ್ಯವಸ್ಥೆಯೊಂದಿಗೆ ನಡೆಸುವ ಎಲ್ಲಾ ವ್ಯವಹಾರಗಳಿಗೆ ರೈತರು ಹಣಕ್ಕೆ ಬದಲು ಬೆಳೆ ಜಮೆ ಮಾಡುವ ವಸ್ತು ವಿನಿಮಯ ಕಾರ್ಯಕ್ರಮದ ಪ್ರಾರಂಭೋತ್ಸವಕ್ಕಾಗಿ ಸೋಮವಾರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಗೆ ಹೊರಟಿದ್ದ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ರೈತ ಕಂಗಾಲಾಗಿದ್ದಾನೆ. ಯಾಂತ್ರೀಕೃತ ಕೃಷಿಯಿಂದ ಖರ್ಚು ಹೆಚ್ಚಾಗಿ ಹಾಕಿದ ಬಂಡವಾಳವೂ ವಾಪಸಾಗುತ್ತಿಲ್ಲ. ಬೆಳೆಗಳಿಗೆ ರೈತನೇ ಬೆಲೆ ನಿಗದಿ ಮಾಡುವಂತಹ ವಾತಾವರಣ ಸೃಷ್ಟಿ ಮಾಡಲು ಹೊರಟಿರುವ ರೈತ ಸಂಘದ ಈ ಹೋರಾಟ ಪ್ರಸ್ತುತವಾಗಿದೆ ಎಂದರು.

ADVERTISEMENT

ಪುರಸಭೆ ಮಾಜಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್‌ ಮಾತನಾಡಿ, ರೈತರ ಬೆಳೆಗಳಿಗೆ ಉತ್ತಮ ಬೆಲೆ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ರೈತ ಸಂಘದ ಹೋರಾಟ ಶ್ಲಾಘನೀಯ. ಸರ್ಕಾರಗಳು ತಳೆಯುವ ರೈತ ವಿರೋಧಿ ನೀತಿಗಳಿಂದ ವಿದೇಶಿ ಉತ್ಪನ್ನಗಳು ಆಮದಾಗಿ ದೇಸಿ ಉತ್ಪನ್ನಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತ ದೇಶದ ಬೆನ್ನೆಲುಬು ಎಂದು ಗಾಂಧೀಜಿ ಹೇಳಿದ್ದರು. ಆದರೆ, ರೈತನ ಬದುಕು ಸಂಕಷ್ಟದಲ್ಲಿದೆ. ತಮ್ಮ ಬೆಳೆಗಳನ್ನೇ ತೆರಿಗೆ, ಸೇವಾ ಶುಲ್ಕವಾಗಿ ಕಟ್ಟುವ ವ್ಯವಸ್ಥೆ ದೇಶದಲ್ಲಿ ಆಗಬೇಕಾಗಿದೆ ಎಂದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಂ. ಕುಮಾರಯ್ಯ ಹಾಗೂ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.