ತುಮಕೂರು: ಕಳೆದ 6 ತಿಂಗಳಿನಿಂದ ವೇತನ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಕೊನೆಗೂ ವೇತನ ಬಿಡುಗಡೆಯಾಗಿದೆ.
ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ 121 ಮಂದಿ ಪೌರ ಕಾರ್ಮಿಕರನ್ನು 2023ರ ಆಗಸ್ಟ್ ತಿಂಗಳಲ್ಲಿ ಕಾಯಂ ಮಾಡಲಾಗಿತ್ತು. ಅವರಿಗೆ ಪ್ರಾರಂಭದ ಒಂದು ತಿಂಗಳು ಮಾತ್ರ ಸಂಬಳ ನೀಡಿದ್ದು, ನಂತರದ ದಿನಗಳಲ್ಲಿ ವೇತನ ಪಾವತಿಸುವುದನ್ನೇ ನಿಲ್ಲಿಸಲಾಗಿತ್ತು.
ಈ ಸಂಬಂಧ ‘ಪ್ರಜಾವಾಣಿ’ಯಲ್ಲಿ ಫೆ. 25ರಂದು ‘ಪೌರ ಕಾರ್ಮಿಕರಿಗೆ 6 ತಿಂಗಳ ವೇತನ ಬಾಕಿ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ವರದಿ ಪ್ರಕಟಗೊಂಡ ನಂತರ ಎಚ್ಚೆತ್ತುಕೊಂಡ ಪಾಲಿಕೆಯ ಅಧಿಕಾರಿಗಳು ಸೋಮವಾರ ಪೌರ ಕಾರ್ಮಿಕರ ಬ್ಯಾಂಕ್ ಖಾತೆಗೆ ವೇತನ ಪಾವತಿ ಮಾಡಲು ಮುಂದಾಗಿದ್ದಾರೆ. ವೇತನ ಬಿಡುಗಡೆ ಆಗುತ್ತಿರುವುದನ್ನು ಗಮನಿಸಿದ ಪೌರ ಕಾರ್ಮಿಕರ ಮುಖದಲ್ಲಿ ನಗು ಮೂಡಿತ್ತು.
ಕಳೆದ ಜನವರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ‘ಈ ವಿಷಯವನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು. ವೇತನ ಪಾವತಿಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದರು. ಆದರೆ, ಈವರೆಗೂ ವೇತನ ಬಿಡುಗಡೆ ಆಗಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.