ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಬಸ್ಗಳಲ್ಲಿ ಡಿಜಿಟಲ್ ಪಾವತಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಜಿಲ್ಲೆಯಲ್ಲಿ ಕಳೆದ 7 ತಿಂಗಳಲ್ಲಿ ₹6.79 ಕೋಟಿ ಹಣ ಸಂಗ್ರಹವಾಗಿದೆ.
ತುಮಕೂರು ವಿಭಾಗದ ವ್ಯಾಪ್ತಿಯಲ್ಲಿ 2024ರ ನವೆಂಬರ್ನಿಂದ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತರಲಾಯಿತು. ಅಲ್ಲಿಂದ ಮೇ ಅಂತ್ಯದ ವರೆಗೆ ಒಟ್ಟು 8.01 ಲಕ್ಷ ಪ್ರಯಾಣಿಕರು ಯುಪಿಐ ಕ್ಯೂ.ಆರ್ ಕೋಡ್ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆದಿದ್ದಾರೆ. ಇದರಿಂದ ₹6,79,85,344 ಹಣ ಸಂದಾಯವಾಗಿದೆ.
ಪ್ರಾರಂಭದಲ್ಲಿ ಒಂದು ತಿಂಗಳಿಗೆ ₹50 ಸಾವಿರ ಸಂಗ್ರಹವಾಗುತ್ತಿತ್ತು. ಈಗ ಅದು ₹1.50 ಕೋಟಿಗೆ ತಲುಪಿದೆ. ಹೆಚ್ಚಿನ ಜನರು ಡಿಜಿಟಲ್ ಪಾವತಿಗೆ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ದಿನದಿಂದ ದಿನಕ್ಕೆ ಯುಪಿಐ ಮೂಲಕ ಹಣ ಪಾವತಿಸುವವರ ಸಂಖ್ಯೆ ಹೆಚ್ಚಾಗಿದೆ. ಆರಂಭದ ದಿನಗಳಲ್ಲಿ ನೆಟ್ವರ್ಕ್ ಸಮಸ್ಯೆ, ಸ್ಮಾರ್ಟ್ ಎಲೆಕ್ಟ್ರಿಕ್ ಟಿಕೆಟ್ ಮಷಿನ್ ಸರಿಯಾಗಿ ಕೆಲಸ ಮಾಡದೆ ಇರುವುದು, ಡಿಜಿಟಲ್ ಪಾವತಿ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ಇಲ್ಲದೆ ಇರುವುದರಿಂದ ಹಿನ್ನಡೆಯಾಗಿತ್ತು.
ಈ ಹಿಂದೆ ಬಸ್ಗಳಲ್ಲಿ ಚಿಲ್ಲರೆ ನೀಡುವುದು ನಿರ್ವಾಹಕರ ತಲೆ ನೋವಿಗೆ ಕಾರಣವಾಗಿತ್ತು. ಚಿಲ್ಲರೆ ವಿಷಯಕ್ಕೆ ಜಗಳ, ಗಲಾಟೆ ಆಗುತ್ತಿದ್ದವು. ಡಿಜಿಟಲ್ ಪಾವತಿಯ ನಂತರ ಈ ಚಿಲ್ಲರೆ ಸಮಸ್ಯೆ ತಗ್ಗಿದೆ. ಪ್ರಸ್ತುತ ತುಂಬಾ ಜನ ಫೋನ್ ಪೇ, ಗೂಗಲ್ ಪೇ ಬಳಸುತ್ತಿದ್ದಾರೆ. ಆನ್ಲೈನ್ ಪಾವತಿಯೂ ಎಲ್ಲರಿಗೂ ಅಭ್ಯಾಸವಾಗಿದೆ. ಇದರಿಂದ ಬಸ್ಗಳಲ್ಲಿ ಡಿಜಿಟಲ್ ಪಾವತಿ ಸುಲಭವಾಗಿದೆ. ನಗರ ಭಾಗದ ಬಹುತೇಕ ಕಡೆಗಳಲ್ಲಿ ಯುಪಿಐ ಮುಖಾಂತರವೇ ಟಿಕೆಟ್ ಪಡೆಯುತ್ತಿದ್ದಾರೆ.
711 ಬಸ್: ಜಿಲ್ಲೆಯ 7 ಡಿಪೊಗಳು ತುಮಕೂರು ವಿಭಾಗದ ವ್ಯಾಪ್ತಿಗೆ ಸೇರುತ್ತವೆ. ತುಮಕೂರು 1 ಮತ್ತು 2, ತಿಪಟೂರು, ತುರುವೇಕೆರೆ, ಕುಣಿಗಲ್, ಮಧುಗಿರಿ ಮತ್ತು ಶಿರಾ ಡಿಪೊ ಸೇರುತ್ತದೆ. 7 ಡಿಪೊ ವ್ಯಾಪ್ತಿಯಲ್ಲಿ 711 ಕೆಎಸ್ಆರ್ಟಿಸಿ ಬಸ್ಗಳಿವೆ. ಇದರಲ್ಲಿ 95 ಬಸ್ಗಳು ಕಳೆದ ವರ್ಷವಷ್ಟೇ ಹೊಸದಾಗಿ ಸೇರ್ಪಡೆಯಾಗಿವೆ. ಈ ಪೈಕಿ 65 ಅಶ್ವಮೇಧ ಬಸ್ಗಳು. ನಗರದಲ್ಲಿ 60 ಬಸ್ಗಳು ಸಂಚರಿಸುತ್ತಿವೆ.
ಎಲ್ಲ ಡಿಪೊಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಯುಪಿಐ ಬಳಕೆ ಕಡಿಮೆ ಇದೆ. ನೆಟ್ವರ್ಕ್ ಸಮಸ್ಯೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಹಳ್ಳಿಗಳ ಕಡೆಗೆ ಡಿಜಿಟಲ್ ಪಾವತಿ ಇಳಿಕೆಯಾಗಿದೆ.
ಡಿಜಿಟಲ್ ಪಾವತಿ ಮೂಲಕ ಸಂಗ್ರಹವಾದ ಹಣ
ತಿಂಗಳು;ಪ್ರಯಾಣಿಕರು;ಹಣ (₹)
ನವೆಂಬರ್;11,544;10,46,701
ಡಿಸೆಂಬರ್;64,266;51,87,415
ಜನವರಿ;1,12,505;92,11,961
ಫೆಬ್ರುವರಿ;1,29,629;1,10,39,207
ಮಾರ್ಚ್;1,55,947;1,29,81,618
ಏಪ್ರಿಲ್;1,52,804;1,33,27,656
ಮೇ;1,74,632;1,51,90,786
ಒಟ್ಟು;8,01,327;6,79,85,344
ಜಿಲ್ಲೆ ವ್ಯಾಪ್ತಿಯಲ್ಲಿ 7 ಡಿಪೊ 711 ಬಸ್ಗಳು ಸಂಚಾರ ಎಲ್ಲ ಕಡೆ ಯುಪಿಐ ಬಳಕೆ
ಸಮಯ ಉಳಿತಾಯ ಉಪ ವಿಭಾಗದ ವ್ಯಾಪ್ತಿಯಲ್ಲಿ ಪ್ರಯಾಣಿಕರಿಂದ ಒಳ್ಳೆಯ ಸ್ಪಂದನೆ ಸಿಗುತ್ತಿದೆ. ಪ್ರಾರಂಭದಲ್ಲಿ ಸ್ವಲ್ಪ ನಿಧಾನ ಗತಿಯಲ್ಲಿ ಸಾಗಿತ್ತು. ದಿನ ಕಳೆದಂತೆ ಡಿಜಿಟಲ್ ಪಾವತಿ ಮುಖಾಂತರ ಟಿಕೆಟ್ ಪಡೆಯುವವರು ಜಾಸ್ತಿಯಾಗಿದ್ದಾರೆ. ಇದರಿಂದ ನಿರ್ವಾಹಕರು ಮತ್ತು ಚಾಲಕರ ಸಮಯ ಉಳಿತಾಯವಾಗುತ್ತದೆ. ಎಸ್.ಚಂದ್ರಶೇಖರ್ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.