ತಿಪಟೂರು: ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಿಂದ ಗ್ರಾಮ ಪಂಚಾಯಿತಿ ಅದ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಮತ್ತು ಕಾರ್ಯದರ್ಶಿಗಳಿಗೆ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರವಾಗಿದ್ದು, ಇಲ್ಲಿನ ಜನಪ್ರತಿನಿಧಿಗಳು ಯಾವುದೇ ಚೌಕಟ್ಟುಗಳಿಲ್ಲದೆ ವಾಸ್ತವ ಅರಿತು ಪಾರದರ್ಶಕವಾಗಿ ಕೆಲಸ ಮಾಡಬಹುದು ಎಂದರು.
ರಾಜ್ಯದ ಉಜಿನಿ ಗ್ರಾ.ಪಂ ನರೇಗಾ ಯೋಜನೆಯಲ್ಲಿ ₹6 ಕೋಟಿ ಕಾಮಗಾರಿ ಸಾಧನೆ ಮಾಡಿ ಪ್ರಥಮ ಸ್ಥಾನ ಪಡೆದಿದೆ ಎಂದರು.
ಸದಸ್ಯರು ಹಳ್ಳಿಯ ಜನರ ಜವಾಬ್ದಾರಿ ತೆಗೆದುಕೊಂಡು ಅಧಿಕಾರ ನಡೆಸುವಾಗ ವ್ಯಯುಕ್ತಿಕ ಕಾಮಾಗಾರಿಗಳಿಗೆ ಕೂಲಿ ನೀಡುತ್ತಾ, ಸಮುದಾಯ ಕಾರ್ಯಕ್ರಮಗಳಿಗೆ ಸಾಮಗ್ರಿಗಳ ಆಧಾರಿತವಾಗಿ ಕೆಲಸ ಮಾಡಬೇಕಿದೆ. ಜನಪತ್ರಿನಿಧಿಗಳು ಮುಂದಿನ ಇಪ್ಪತ್ತು ವರ್ಷ ಶಾಶ್ವತ ಕಾಮಗಾರಿಗಳ ಕಡೆ ಗಮನಹರಿಸಬೇಕು ಎಂದರು.
ನರೇಗಾ ಯೋಜನೆ ಗುರಿ ರಹಿತವಾಗಿದ್ದು, ಶಕ್ತಿಗೆ ಅನುಗುಣವಾಗಿ, ಒಳ್ಳೆಯ ಕೆಲಸಗಳನ್ನು ಮಾಡುವ ಯೋಜನೆಯಾಗಿದೆ. ₹1,500 ಕೋಟಿ ವ್ಯಯಿಸಲಾಗಿದೆ. ಸರ್ಕಾರದಲ್ಲಿ ನರೇಗಾ ಯೋಜನೆಗಳಿಗೆ ಹಣಕಾಸಿನ ಕೊರತೆಯಿಲ್ಲ. ಗ್ರಾ.ಪಂ ಎಲ್ಲರೂ ಒಗ್ಗೂಡಿ ಕೆಲಸ ಮಾಡಿದಾಗ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದರು.
ಶಾಸಕ ಕೆ.ಷಡಕ್ಷರಿ ಮಾತನಾಡಿ, ಗ್ರಾಮ ಸ್ವರಾಜ್ಯ ಮಹಾತ್ಮ ಗಾಂಧೀಜಿ ಕನಸು. ಗ್ರಾ.ಪಂ ಸಬಲಿಕರಣಗೊಂಡಾಗ ಗಾಂಧೀಜಿ ಕನಸಿಗೆ ಜೀವ ಬರುತ್ತದೆ. ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದರೆ, ಗ್ರಾಮಗಳಲ್ಲಿ ಜನ ಅತ್ಯಂತ ಗೌರವದಿಂದ ಕಾಣುತ್ತಾರೆ. ಸರ್ಕಾರದ ಯೋಜನೆಗಳು ತಳಮಟ್ಟದ ಜನರಿಗೆ ತಲುಪುವಂತೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಗ್ರಾಮ ಪಂಚಾಯಿತಿಗಳು ಮೊದಲಿಗಿಂತಲೂ ಹೆಚ್ಚು ಜವಾಬ್ದಾರಿಯುತವಾಗಿದ್ದು ಪಕ್ಷಾತೀತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಎಮ್.ಸುದರ್ಶನ್ ಮಾತನಾಡಿ, ಗ್ರಾಮ ಪಂಚಾಯಿತಿಗಳಿಗೆ ಮೊದಲಿಗಿಂತಲೂ ಹೆಚ್ಚಿನ ಅಧಿಕಾರ ನೀಡಲಾಗಿದೆ. 29 ಇಲಾಖೆಗಳ ವಿಷಯಗಳ ಬಗ್ಗೆ ಗಮನಹರಿಸಿ ಕೆಲಸ ನಿರ್ವಹಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕಿದೆ. ರಸ್ತೆ, ನೀರು, ಚರಂಡಿ, ಬೀದಿದೀಪ ನಿರ್ವಹಣೆ, ಶೌಚಾಲಯ ನಿರ್ಮಾಣ, ಶಾಲಾಭಿವೃದ್ಧಿ, ಕ್ರೀಡಾಂಗಣ, ಆಶ್ರಯ ಯೋಜನೆ, ಅರಿವು ಕೇಂದ್ರ ಸೇರಿದಂತೆ ಕಂದಾಯ ಹಾಗೂ ಪೊಲೀಸ್ ಇಲಾಖೆಗಳನ್ನು ಹೊರತುಪಡಿಸಿ ಜನರಿಗೆ ಸಹಾಯ ಮಾಡಬಹುದಾಗಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಒತ್ತುವರಿ ತೆರವಿನ ಅಧಿಕಾರವನ್ನು ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ನೀಡಿದ್ದು, ಗ್ರಾಮೀಣ ಭಾಗದಲ್ಲಿ ಜನರ ಆಶೋತ್ತರಗಳಿಗೆ ಚುನಾಯಿತ ಪ್ರತಿನಿಧಿಗಳು ಜವಾಬ್ದಾರಿ ಜೊತೆಗೆ ಕರ್ತವ್ಯ ನಿರ್ವಹಿಸಬೇಕು ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪವನ್, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ನಂದೀಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೀಪಾ, ಗ್ರಾಮೀಣಾಭಿವೃದ್ಧಿ ಕುಡಿಯುವ ನೀರು ಇಲಾಖೆಯ ನಾಗೇಂದ್ರ, 26 ಗ್ರಾ ಪಂ ಪಿಡಿಒ, ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.