ADVERTISEMENT

ಅಕ್ಷರ ದಾಸೋಹ ಸಿಬ್ಬಂದಿಗೆ ದಿನಸಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 6:32 IST
Last Updated 10 ಜೂನ್ 2021, 6:32 IST
ದಿನಸಿ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ವೆಂಕಟರಮಣಪ್ಪ
ದಿನಸಿ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ವೆಂಕಟರಮಣಪ್ಪ   

ಪಾವಗಡ: ಕೋವಿಡ್–19 ನಿಯಂತ್ರಿಸಲು ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಬುಧವಾರ ರಾಮಕೃಷ್ಣ ಸೇವಾಶ್ರಮ ಮತ್ತು ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಆಯೋಜಿಸಿದ್ದ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗೆ ದಿನಸಿ ಕಿಟ್‍ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೋಂಕು ತಗುಲಿ ಸಾಕಷ್ಟು ಕುಟುಂಬಗಳು ಕಷ್ಟ ಅನುಭವಿಸುತ್ತಿವೆ. ಸೋಂಕಿನಿಂದ ಮೃತಪಟ್ಟ ಎಷ್ಟೋ ಕುಟುಂಬಗಳ ಸದಸ್ಯರು ಅನಾಥರಾಗಿದ್ದಾರೆ. ಜನತೆ ಲಸಿಕೆ ಹಾಕಿಸಿಕೊಂಡು ಸೋಂಕು ಹರಡುವುದನ್ನು ತಡೆಯಲು ಸಹಕರಿಸಬೇಕು. ಇತರರಿಗೂ ಲಸಿಕೆ ಹಾಕಿಸುವಂತೆ ತಿಳಿಸಬೇಕು ಎಂದರು.

ADVERTISEMENT

ಸ್ವಾಮಿ ಜಪಾನಂದ ಜಿ ಮಾತನಾಡಿ, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆ, ಶಿರಾ ತಾಲ್ಲೂಕುಗಳ 2,605 ಮಂದಿ ಅಕ್ಷರದಾಸೋಹ ಅಡುಗೆ ಸಿಬ್ಬಂದಿಗೆ ₹40 ಲಕ್ಷ ವೆಚ್ಚದಲ್ಲಿ ಪಡಿತರ ಕಿಟ್ ವಿತರಿಸಲಾಗುವುದು. ರಾಮಕೃಷ್ಣ ಸೇವಾಶ್ರಮ, ಇನ್ಫೊಸಿಸ್ ಸಹಯೋಗದಲ್ಲಿ ಈಗಾಗಲೇ ಜಿಲ್ಲೆಯ ಸಾವಿರಾರು ಮಂದಿಗೆ ಪಡಿತರ ವಿತರಿಸಲಾಗಿದೆ ಎಂದರು.

ಜಿಲ್ಲೆಯ 50 ಸಾವಿರ ಮಕ್ಕಳಿಗೆ ಹಾಲಿನ ಜೊತೆ ಪೌಷ್ಟಿಕ ಆಹಾರ ವಿತರಿಸಲು 2019ರಲ್ಲಿ ಚಾಲನೆ ನೀಡಲಾಗಿತ್ತು. ಕೋವಿಡ್ ಸಮಸ್ಯೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಮುಂದಿನ ದಿನಗಳಲ್ಲಿ ಯೋಜನೆಗೆ ಮತ್ತೆ ಚಾಲನೆ ಸಿಗಲಿದೆ ಎಂದರು.

ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ ಪ್ರಬಂಧಕ ಕಿರಣ್, ಪುರಸಭೆ ಸದಸ್ಯ ಸುದೇಶ್ ಬಾಬು, ವಿಷಯ ಪರಿವೀಕ್ಷಕ ಚಿತ್ತಯ್ಯ ಮಾತನಾಡಿದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ ಪದಾಧಿಕಾರಿಗಳಾದ ರಾಜೀವ್, ರಾಜೇಶ್, ದೈಹಿಕ ಶಿಕ್ಷಣ ಅಧಿಕಾರಿ ಬಸವರಾಜು, ದೇವರಾಜರಾವ್ ಲೋಕೇಶ್, ಭರತ್, ನಮ್ಮ ಹಕ್ಕು ಅಧ್ಯಕ್ಷ ಗಿರೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.