ADVERTISEMENT

ಪಾಲಿಕೆಗೆ ಕೊನೆಗೂ ಐಎಎಸ್ ಅಧಿಕಾರಿ

ಪಾಲಿಕೆ ಆಯುಕ್ತರಾಗಿ ಎಚ್.ವಿ.ದರ್ಶನ್‌

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 14:37 IST
Last Updated 21 ಫೆಬ್ರುವರಿ 2023, 14:37 IST

ತುಮಕೂರು: ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ಕೊನೆಗೂ ಐಎಎಸ್ ಅಧಿಕಾರಿ ಎಚ್.ವಿ.ದರ್ಶನ್‌ ಅವರನ್ನು ಸರ್ಕಾರ ನೇಮಕ ಮಾಡಿದೆ. ಭೂಬಾಲನ್ ನಂತರ ಐಎಎಸ್ ಅಧಿಕಾರಿಯನ್ನು ಪಾಲಿಕೆ ಆಯುಕ್ತರನ್ನಾಗಿ ನೇಮಕ ಮಾಡಿರಲಿಲ್ಲ.

ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಭೂಬಾಲನ್ ಅವರನ್ನು ಸ್ಮಾರ್ಟ್ ಸಿಟಿಗೆ ವರ್ಗಾವಣೆ ಮಾಡಲಾಯಿತು. ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವುದು ಸೇರಿದಂತೆ ಸಾಕಷ್ಟು ಪಾರದರ್ಶಕತೆ ತಂದಿದ್ದರು. ಇದು ರಾಜಕಾರಣಿಗಳಿಗೆ ಸರಿ ಕಾಣಲಿಲ್ಲ. ಕೊನೆಗೆ ಅಲ್ಲಿಂದಲೂ ವರ್ಗಾವಣೆ ಮಾಡಿಸಲಾಯಿತು.

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ ಎಲ್ಲವೂ ಮುಗಿದ ಮೇಲೆ ಐಎಎಸ್ ಅಧಿಕಾರಿಯನ್ನು ಪಾಲಿಕೆಗೆ ವರ್ಗಾವಣೆ ಮಾಡಲಾಗಿದೆ. ನಗರದಲ್ಲಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ, ಬೃಹತ್ ಪ್ರಮಾಣದ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿದ್ದ ಸಮಯದಲ್ಲಿ ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಲಿಲ್ಲ.

ADVERTISEMENT

ಗುಣಮಟ್ಟ ಸರಿ ಇಲ್ಲವಾದರೆ ಐಎಎಸ್ ಅಧಿಕಾರಿಗಳು ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಪ್ರಶ್ನಿಸಬಹುದು ಎಂಬ ಕಾರಣಕ್ಕೆ ಪಾಲಿಕೆ ಆಯುಕ್ತರ ಜಾಗಕ್ಕೆ ವರ್ಗಾವಣೆ ಮಾಡಲಿಲ್ಲ. ನಗರಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಅವರು ಆಯುಕ್ತರಾಗಿ ಸುಮಾರು ಎರಡು ವರ್ಷಗಳ ಕಾಲ ಕೆಲಸ ನಿರ್ವಹಿಸಿದರು. ನಂತರ ಆಯುಕ್ತರಾಗಿ ಬಂದ ಸಿ.ಯೋಗಾನಂದ ಅವರನ್ನು ಮೂರು ತಿಂಗಳಲ್ಲೇ ಎತ್ತಂಗಡಿ ಮಾಡಲಾಗಿದೆ.

ಮಹಾನಗರ ಪಾಲಿಕೆ ಆಯುಕ್ತರ ಹುದ್ದೆಗೆ ಐಎಎಸ್ ಅಥವಾ ಕೆಎಎಸ್ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಂಡು ಬರಲಾಗಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಉದ್ದೇಶಪೂರ್ವಕವಾಗಿ ತಮಗೆ ಬೇಕಾದ ಅಧಿಕಾರಿಗಳನ್ನೇ ವರ್ಗಾವಣೆ ಮಾಡಿಸಲಾಗಿತ್ತು ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.