ADVERTISEMENT

ಗಿರಿಜನ ಉತ್ಸವ ಉದ್ಘಾಟನೆ

ಬೆಳ್ಳಿಬಟ್ಟಲು: ಕಲಾ ತಂಡಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 16:31 IST
Last Updated 26 ಸೆಪ್ಟೆಂಬರ್ 2022, 16:31 IST
ಪಾವಗಡ ತಾಲ್ಲೂಕಿನ ಬೆಳ್ಳಿಬಟ್ಟಲು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ಗಿರಿಜನ ಉತ್ಸವವನ್ನು ನಿಡಗಲ್ ಪೀಠದ ವಾಲ್ಮೀಕಿ ಸಂಜಯ ಕುಮಾರ ಸ್ವಾಮೀಜಿ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ವಿ. ವೆಂಕಟೇಶ್, ಜಾನಪದ ಸಾಹಿತಿ ಸಣ್ಣನಾಗಪ್ಪ, ಕಲಾವಿದ ನಿಂಗಪ್ಪ ಉಪಸ್ಥಿತರಿದ್ದರು
ಪಾವಗಡ ತಾಲ್ಲೂಕಿನ ಬೆಳ್ಳಿಬಟ್ಟಲು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ಗಿರಿಜನ ಉತ್ಸವವನ್ನು ನಿಡಗಲ್ ಪೀಠದ ವಾಲ್ಮೀಕಿ ಸಂಜಯ ಕುಮಾರ ಸ್ವಾಮೀಜಿ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ವಿ. ವೆಂಕಟೇಶ್, ಜಾನಪದ ಸಾಹಿತಿ ಸಣ್ಣನಾಗಪ್ಪ, ಕಲಾವಿದ ನಿಂಗಪ್ಪ ಉಪಸ್ಥಿತರಿದ್ದರು   

ಪಾವಗಡ: ‘ಕಲಾ ಪೋಷಣೆಯು ಸಮುದಾಯದ ಜವಾಬ್ದಾರಿಯಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ವಿ. ವೆಂಕಟೇಶ್ ತಿಳಿಸಿದರು.

ತಾಲ್ಲೂಕಿನ ಬೆಳ್ಳಿಬಟ್ಟಲು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ಗಿರಿಜನ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ವೈವಿಧ್ಯಮಯವಾದ ಜನಪದ ಕಲಾ ಪ್ರಕಾರಗಳಿವೆ. ಪ್ರತಿ ಗ್ರಾಮದಲ್ಲೂ ಕಲಾವಿದರಿದ್ದಾರೆ. ಅವರ ಕಲಾ ಪ್ರದರ್ಶನಕ್ಕೆ ಅವಕಾಶವಿಲ್ಲದೆ ಪ್ರತಿಭೆ ಬೆಳಕಿಗೆ ಬಾರದ ಸ್ಥಿತಿಯಲ್ಲಿದ್ದಾರೆ. ಸಮುದಾಯ ಮತ್ತು ಸರ್ಕಾರ ಕಲೆ ಮತ್ತು ಕಲಾವಿದರಿಗೆ ಸಹಕಾರ, ಪ್ರೋತ್ಸಾಹ ನೀಡಿ ಕಲೆ, ಕಲಾವಿದರನ್ನು ಉಳಿಸಬೇಕಾಗಿದೆ ಎಂದು ಒತ್ತಾಯಿಸಿದರು.

ADVERTISEMENT

ಜಾನಪದ ಸಾಹಿತಿ ಸಣ್ಣನಾಗಪ್ಪ, ನಿಡಗಲ್ಲು ಸುತ್ತಮುತ್ತಲಿನ ಪ್ರದೇಶವು ಜನಪದ ಕಲೆಗಳ ತವರೂರಾಗಿದೆ. ಇಲ್ಲಿನ ಕಲಾವಿದರು ಮತ್ತು ಕಲೆಯು ರಾಷ್ಟ್ರ, ರಾಜ್ಯಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಕೋಲಾಟ, ಚಿಕ್ಕಾಟ, ದೊಡ್ಡಾಟ, ರಾಗಿ ಬೀಸೋ ಪದ, ಸೋಬಾನೆ ಪದ, ದೇವರ ಭಜನೆ ಪ್ರಕಾರಗಳು ಕಂಡುಬರುತ್ತವೆ ಎಂದರು.

ಅವಸಾನದ ಹಾದಿ ಹಿಡಿದಿರುವ ಈ ಕಲೆಗಳ ರಕ್ಷಣೆಗೆ ಸರ್ಕಾರದ ಗಿರಿಜನ ಉತ್ಸವ, ಜನಪದ ಉತ್ಸವಗಳು ಉತ್ತಮ ವೇದಿಕೆಯಾಗಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಹೇಳಿದರು.

ಕಲಾವಿದ ನಿಂಗಪ್ಪ ಮಾತನಾಡಿ, ಜನಪದ ಕಲೆಗಳು ಇಂದು ಹಿರಿಯ ತಲೆಮಾರಿಗೆ ಮಾತ್ರ ಸೀಮಿತವಾಗಿವೆ. ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಸರ್ಕಾರ ಮಾಡುತ್ತಿರುವುದು ಸಂತಸ ತಂದಿದೆ. ಈ ಕಲೆಗಳು ಮುಂದಿನ ತಲೆಮಾರಿಗೂ ಉಳಿಯಬೇಕಾದರೆ ಯುವಜನತೆ ಟಿ.ವಿ, ಮೊಬೈಲ್ ಇತ್ಯಾದಿ ಗೀಳು ಬಿಟ್ಟು ಕಲೆಗಳ ಅಧ್ಯಯನ ಮಾಡಬೇಕು ಎಂದರು.

ನಿಡಗಲ್ ಪೀಠದ ಸಂಜಯಕುಮಾರ ಸ್ವಾಮೀಜಿ ಮಾತನಾಡಿದರು. ಕೀಲುಕುದುರೆ, ಗರಡಿ ಗೊಂಬೆ, ಪಾಳೇಗಾರ ವೇಷ, ಬೇಡರ ಪಡೆ, ಸೋಮನ ಕುಣಿತ, ಕೋಲಾಟ, ಭಜನೆ, ಚಿಲಿಪಿಲಿ ಗೊಂಬೆ ತಂಡಗಳು ಕಲಾ ಪ್ರದರ್ಶನ ನೀಡಿದವು.

ಸುಗಮ ಸಂಗೀತ, ರಂಗ ಗೀತೆ, ಭಜನೆ ಹಾಡು, ಸೋಬಾನೆ ಪದವನ್ನು ಕಲಾವಿದರು ಹಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಂದ್ರ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಕಲಾವಿದ ಮಲ್ಲಿಕಾರ್ಜುನ ಕೆಂಕೆರೆ, ಚಂದ್ರಶೇಖರ ರೆಡ್ಡಿ, ಅಕ್ಕಮಹಾದೇವಿ, ಜಯಮ್ಮ, ಎಂ.ಜಿ. ನಾರಾಯಣಪ್ಪ, ಓಂಕಾರನಾಯಕ, ಲಿಂಗಪ್ಪ, ಮರಿಸ್ವಾಮಿ, ನವೀನ್, ಬಲರಾಂ, ತಿಮ್ಮಯ್ಯ, ಮಾರಪ್ಪ, ಹೊ.ಮಾ. ನಾಗರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.