ADVERTISEMENT

ಟೆಂಡರ್‌ ನೀಡುವಲ್ಲಿ ಅನ್ಯಾಯ: ರಾಯಸಂದ್ರ ರವಿ

ಕಾಂಗ್ರೆಸ್‌ ಮುಖಂಡನಿಂದ ಅನಿರ್ದಿಷ್ಟಾವಧಿ ಧರಣಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 2:49 IST
Last Updated 15 ಮಾರ್ಚ್ 2024, 2:49 IST
ತುಮಕೂರಿನ ಗುತ್ತಿಗೆದಾರರ ಸಂಘದ ಕಚೇರಿ ಮುಂಭಾಗದ ಗುರುವಾರ ಟೆಂಡರ್‌ ನೀಡುವ ವಿಚಾರದಲ್ಲಿ ಅರ್ಹ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಮುಖಂಡ, ಗುತ್ತಿಗೆದಾರ ರಾಯಸಂದ್ರ ರವಿಕುಮಾರ್‌ ಅನಿರ್ದಿಷ್ಟಾವಧಿ ಧರಣಿ ನಡೆಸಿದರು. ಮುಖಂಡರಾದ ಕೊಟ್ಟ ಶಂಕರ್‌, ರಂಗಧಾಮಯ್ಯ ಇತರರು ಹಾಜರಿದ್ದರು
ತುಮಕೂರಿನ ಗುತ್ತಿಗೆದಾರರ ಸಂಘದ ಕಚೇರಿ ಮುಂಭಾಗದ ಗುರುವಾರ ಟೆಂಡರ್‌ ನೀಡುವ ವಿಚಾರದಲ್ಲಿ ಅರ್ಹ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಮುಖಂಡ, ಗುತ್ತಿಗೆದಾರ ರಾಯಸಂದ್ರ ರವಿಕುಮಾರ್‌ ಅನಿರ್ದಿಷ್ಟಾವಧಿ ಧರಣಿ ನಡೆಸಿದರು. ಮುಖಂಡರಾದ ಕೊಟ್ಟ ಶಂಕರ್‌, ರಂಗಧಾಮಯ್ಯ ಇತರರು ಹಾಜರಿದ್ದರು   

ತುಮಕೂರು: ‘ಜಿಲ್ಲೆಯಲ್ಲಿ ಪ್ರಭಾವಿಗಳು, ಶಾಸಕರು, ಸಚಿವರ ಹಿಂಬಾಲಕರಿಗೆ ಟೆಂಡರ್‌ ಸಿಗುತ್ತಿದೆ. ಪ್ರಾಮಾಣಿಕ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿ ಕಾಂಗ್ರೆಸ್‌ ಮುಖಂಡ, ಗುತ್ತಿಗೆದಾರ ರಾಯಸಂದ್ರ ರವಿಕುಮಾರ್‌ ನಗರದ ಗುತ್ತಿಗೆದಾರರ ಸಂಘದ ಕಚೇರಿ ಮುಂಭಾಗ ಗುರುವಾರ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.

‘ಕಳೆದ ಸೆಪ್ಪೆಂಬರ್‌ನಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರು ಕೆಎಂಆರ್‌ಇಸಿ ಟೆಂಡರ್‌ ಆಹ್ವಾನ ಮಾಡಿದ್ದರು. ಗುಬ್ಬಿ, ತಿಪಟೂರು ತಾಲ್ಲೂಕಿನ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಟೆಂಡರ್‌ ಕರೆದಿದ್ದರು. ನಾನು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಾಂತ್ರಿಕ, ಆರ್ಥಿಕ ಬಿಡ್‌ನಲ್ಲಿ ಅರ್ಹತೆ ಪಡೆದಿದ್ದೆ. ನಂತರ ಅನುಮೋದನೆ ಸಮಯದಲ್ಲಿ ನನಗೆ ಟೆಂಡರ್‌ ತಪ್ಪಿಸಿದ್ದಾರೆ’ ಎಂದು ರವಿಕುಮಾರ್‌ ದೂರಿದರು.

ಯಾರದ್ದೋ ಪ್ರಭಾವಕ್ಕೆ ಮಣಿದು ಟೆಂಡರ್‌ ರದ್ದು ಮಾಡಿದ್ದಾರೆ. ಅಗ್ರಿಮೆಂಟ್‌ ಮಾಡಿಕೊಳ್ಳಲು ಬಂದಾಗ ‘ಕರಾರು ಮಾಡಿಕೊಡಲು ಆಗುವುದಿಲ್ಲ’ ಎಂದು ಅಧಿಕಾರಿಗಳು ತಿಳಿಸಿದರು. ನ್ಯಾಯ ದೊರೆಯುವ ತನಕ ಇಲ್ಲಿಂದ ಕದಲುವುದಿಲ್ಲ ಎಂದು ಎಚ್ಚರಿಸಿದರು.

ADVERTISEMENT

ಟೆಂಡರ್‌ ಪಡೆಯುವ ಕೊನೆ ಹಂತದಲ್ಲಿ ಅನ್ಯಾಯ ಮಾಡಿದ್ದಾರೆ. ಶಕ್ತಿ ಇರುವವರು ಟೆಂಡರ್‌ ತೆಗೆದುಕೊಳ್ಳುತ್ತಿದ್ದಾರೆ. ಶಿಸ್ತು, ನ್ಯಾಯ ಬದ್ಧವಾಗಿ ಟೆಂಡರ್‌ನಲ್ಲಿ ಭಾಗವಹಿಸಿದವರಿಗೆ ಅನ್ಯಾಯವಾಗುತ್ತಿದೆ. ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ಮಾಡಬೇಕು ಎಂದರು.

ಮುಖಂಡರಾದ ಕೊಟ್ಟ ಶಂಕರ್‌, ರಂಗಧಾಮಯ್ಯ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.