ADVERTISEMENT

ಭೂಸಂತ್ರಸ್ತರಿಂದ ಮತ ಜಾಗೃತಿಗೆ ತಡೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 17:45 IST
Last Updated 11 ಏಪ್ರಿಲ್ 2019, 17:45 IST
ತಿಪಟೂರು ತಾಲ್ಲೂಕು ಮಾದೀಹಳ್ಳಿ ಗ್ರಾಮದಲ್ಲಿ ಮತ ಜಾಗೃತಿ ಮೂಡಿಸಲು ಬಂದಿದ್ದ ತಂಡಕ್ಕೆ ಭೂಸಂತ್ರಸ್ತರು ತಡೆದರು
ತಿಪಟೂರು ತಾಲ್ಲೂಕು ಮಾದೀಹಳ್ಳಿ ಗ್ರಾಮದಲ್ಲಿ ಮತ ಜಾಗೃತಿ ಮೂಡಿಸಲು ಬಂದಿದ್ದ ತಂಡಕ್ಕೆ ಭೂಸಂತ್ರಸ್ತರು ತಡೆದರು   

ತಿಪಟೂರು: ಭೂಸಂತ್ರಸ್ತರು ಮತದಾನ ಬಹಿಷ್ಕಾರ ಚಳುವಳಿ ಮುಂದುವರಿಸಿದ್ದು, ಮತದಾನ ಜಾಗೃತಿ ಕಾರ್ಯಕ್ರಮ ಮಾಡಲು ಬಂದಿದ್ದ ನಾಟಕ ತಂಡ ಮತ್ತು ಅಧಿಕಾರಿಗಳನ್ನು ಹಿಂತಿರುಗಿಸಿದ ಘಟನೆ ಮಾದೀಹಳ್ಳಿ ಗ್ರಾಮದಲ್ಲಿ ನಡೆಯಿತು.

ಗ್ರಾಮದಲ್ಲಿ ವಿವಿಧ ಯೋಜನೆಗಳಿಂದ ಬಹುತೇಕ ಕುಟುಂಬಗಳು ಸಂತ್ರಸ್ತವಾಗಿವೆ. ಅವರ ನೋವಿಗೆ ಸ್ಪಂದಿಸದ ಆಡಳಿತ ವರ್ಗ ಗ್ರಾಮಕ್ಕೆ ಮತದಾನ ಜಾಗೃತಿ ಕಾರ್ಯಕ್ರಮ ಮಾಡಲು ಬಂದಿರುವುದು ನಾಚಿಕೆಗೇಡು. ದೇಶದ ನಾಗರಿಕರನ್ನು ಕೇವಲ ಮತ ಹಾಕುವ ಜನಸಂಖ್ಯೆಯಾಗಿ ನೋಡುತ್ತಿರುವ ಸರ್ಕಾರ ಮತ್ತು ಅಧಿಕಾರಿಗಳ ನಡೆ ಖಂಡನೀಯ ಎಂದು ಭೂಸಂತ್ರಸ್ತರು ಕಿಡಿಕಾರಿದರು.

ಸಂತ್ರಸ್ತರಿಗೆ ಸೂಕ್ತ ಪರಿಹಾರ ದೊರಕುವವರೆಗೆ ಮತದಾನ ಮಾಡುವುದಿಲ್ಲ. ಜಾಗೃತಿ ಕಾರ್ಯಕ್ರಮಕ್ಕೂ ಆಸ್ಪದ ನೀಡುವುದಿಲ್ಲ ಎಂದು ನಾಟಕ ತಂಡವನ್ನು ಹಿಂತಿರುಗಿಸಿದರು.

ADVERTISEMENT

ವಿವಿಧ ಪಕ್ಷಗಳು ಮತ್ತು ಅಭ್ಯರ್ಥಿಗಳು ಈವರೆಗೂ ನಮ್ಮ ಸಮಸ್ಯೆ ಮತ್ತು ನೋವಿಗೆ ಸ್ಪಂದಿಸದೆ ಕೇವಲ ಮತ ಬೇಟೆಯಾಡಲು ಪ್ರಯತ್ನಿಸುತ್ತಿದ್ದಾರೆ. ರೈತರ ಜೀವಗಳ ಜತೆ ಚೆಲ್ಲಾಟವಾಡುತ್ತಿದ್ದಾರೆ. ಪ್ರಸ್ತುತ ಚುನಾವಣೆ ಪಕ್ಷಗಳ ಕಾರ್ಯಕರ್ತರು ಮತ್ತು ಅವರ ನಾಯಕರುಗಳಿಗೆ ಮಾತ್ರ ಹಬ್ಬವಾಗಿದೆ. ದೇಶದ ರೈತರಿಗೆ ಸೂತಕವಾಗಿದೆ ಎಂದು ಗ್ರಾಮದ ಮಲ್ಲಣ್ಣ ಮತ್ತು ಭೈರಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ, ತಾಲ್ಲೂಕು ಪಂಚಾಯಿತಿ ಕಾರ್ಯದರ್ಶಿ, ಗ್ರಾಪಂ ಅಧ್ಯಕ್ಷೆ ಹಾಗೂ ಪಿಡಿಓ ಸಂತ್ರಸ್ತರನ್ನು ಮನ ಒಲಿಸುವ ಪ್ರಯತ್ನ ವಿಫಲವಾಯಿತು. ಮಾದೀಹಳ್ಳಿ ಗ್ರಾಮದ ಮಾಧುಸ್ವಾಮಿ, ರೇಣು, ಪ್ರಸಾದ್, ಅಶೋಕ್ ಕುಮಾರ್, ಮನೋಹರ್ ಭೈರನಾಯಕನಹಳ್ಳಿ ಹಾಗೂ ಭೂ ಸಂತ್ರಸ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.