ತುರುವೇಕೆರೆ: ಜನರೊಂದಿಗೆ ಜೆಡಿಎಸ್ ಪಕ್ಷವನ್ನು ಬೆಸೆಯುವ ದೃಷ್ಟಿಯಿಂದ ಪ್ರವಾಸ ಹಮ್ಮಿಕೊಂಡಿದ್ದು, 50 ಲಕ್ಷ ಸದಸ್ಯತ್ವ ನೋಂದಣಿ ಗುರಿ ಹೊಂದಲಾಗಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಿಷ್ಟಾವಂತ ಕಾರ್ಯಕರ್ತರ ಪಕ್ಷ ಜೆಡಿಎಸ್. ಗ್ರಾಮೀಣ ಭಾಗದ ಕಾರ್ಯಕರ್ತರೇ ಜೆಡಿಎಸ್ ಆಧಾರ ಸ್ತಂಭ ಎಂದರು.
ಶಾಸಕ ಎಂ.ಟಿ.ಕೃಷ್ಣಪ್ಪ ರೈತ ಪರ ಹೋರಾಟಗಾರ. ನಾಲ್ಕು ಬಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಗೆಲ್ಲಿಸಿ ಮಂತ್ರಿ ಮಾಡುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಜೆಡಿಎಸ್ ಮುಳುತ್ತಿರುವ ಪಕ್ಷ ಎಂದು ಹೇಳುವ ಕಾಂಗ್ರೆಸ್ ನಾಯಕರು ಜಿಲ್ಲೆ ಹಾಗೂ ತುರುವೇಕೆರೆಗೆ ಬಂದು ನೋಡಿ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 35 ಸ್ಥಾನಗಳಿಗೆ ಸೀಮಿತವಾಗಲಿದೆ ಎಂದು ಭವಿಷ್ಯ ನುಡಿದರು.
ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಬೇಕಿದ್ದ ಕಾರ್ಯಕ್ರಮ ತಡವಾಗಿದ್ದರಿಂದ ಶಾಸಕ ಎಂ.ಟಿ.ಕೃಷ್ಣಪ್ಪ ಹಾಡು ಹಾಡಿ ಕಾರ್ಯಕರ್ತರನ್ನು ರಂಚಿಸಿದರು.
ಶಾಸಕ ಸುರೇಶ್ ಬಾಬು, ಜಿಲ್ಲಾಧ್ಯಕ್ಷ ಅಂಜನಪ್ಪ, ತಾಲ್ಲೂಕು ಅಧ್ಯಕ್ಷ ದೊಡ್ಡೇಗೌಡ, ತಿಪ್ಪೇಸ್ವಾಮಿ, ರಮೇಶ್ ಗೌಡ, ದೊಡ್ಡಾಘಟ್ಟ ಚಂದ್ರೇಶ್, ರಾಜೀವ್, ವೆಂಕಟೇಶ್, ಲೀಲಾವತಿ ಗಿಡ್ಡಯ್ಯ, ಪಿ.ಎಚ್.ಧನಪಾಲ್, ಶಂಕರೇಗೌಡ, ಯಡಗಿಹಳ್ಳಿ ವಿಶ್ವನಾಥ್, ಚಂದ್ರೇಶ್, ತ್ಯಾಗರಾಜು, ವೆಂಕಾಟಪುರ ಯೋಗೀಶ್, ವಿಜಯಕುಮಾರ್, ಬಸವರಾಜು, ರಾಘು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.