ತುಮಕೂರು: ಪತ್ರಕರ್ತ ಸೊಗಡು ವೆಂಕಟೇಶ್ ಅವರ ಹನುಮಂತಪುರದ ಮನೆಯಲ್ಲಿ ಈಚೆಗೆ ₹20 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ.
‘ತಮ್ಮ ಕಾರು ಚಾಲಕ ಟಿ.ಎಸ್.ತಿಪ್ಪೇಸ್ವಾಮಿ ಕಳ್ಳತನ ಮಾಡಿದ್ದಾರೆ’ ಎಂದು ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
‘ಮೇ 26ರಿಂದ 30ರ ವರೆಗೆ ಮಹಾರಾಷ್ಟ್ರದ ಶಿರಡಿ ಸೇರಿದಂತೆ ಇತರೆ ಪ್ರದೇಶಗಳಿಗೆ ಪ್ರವಾಸ ಹೋಗಿದ್ದೆವು. ಪ್ರವಾಸ ಮುಗಿಸಿಕೊಂಡು ವಾಪಸ್ ಮನೆಗೆ ಬಂದು ನೋಡಿದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಒಂದು ಜೊತೆ ಕಿವಿ ಓಲೆ, ಚಿನ್ನದ ಉಂಗುರ, ಬಳೆ, ನೆಕ್ಲೇಸ್ ಸೇರಿ ಇತರೆ 379 ಗ್ರಾಂ ಚಿನ್ನಾಭರಣ ಕಳವಾಗಿದೆ. ಇದರ ಮೌಲ್ಯ ₹20,84,500 ಆಗುತ್ತದೆ. ಇದರ ಜತೆಗೆ ಒಂದಷ್ಟು ದಾಖಲೆಗಳು ಕಾಣೆಯಾಗಿವೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ತಿಪ್ಪೇಸ್ವಾಮಿ ನಂಬಿಕೆಯಿಂದ ಕೆಲಸಕ್ಕೆ ಸೇರಿಕೊಂಡಿದ್ದರು. 2022ರ ಅಕ್ಟೋಬರ್ನಲ್ಲಿ ಮನೆಯ ಸಾಮಗ್ರಿ ಶಿಫ್ಟ್ ಮಾಡುವಾಗ ಬೀರುವಿನ ಬೀಗದ ಕೀಗಳನ್ನು ತೆಗೆದುಕೊಂಡಿದ್ದರು. ಮೂರು ದಿನಗಳ ನಂತರ ಬೀಗದ ಕೀಗಳನ್ನು ವಾಪಸ್ ಕೊಟ್ಟಿದ್ದರು. ಇದೇ ಸಮಯದಲ್ಲಿ ನಕಲಿ ಬೀಗ ಕೀಗಳನ್ನು ಮಾಡಿಕೊಂಡಿರಬಹುದು ಎಂಬ ಅನುಮಾನ ಇದೆ. ಪ್ರವಾಸಕ್ಕೆ ಹೋದಾಗ ಮನೆಯ ಬೀಗ ಒಡೆಯದೆ ಒಳಗೆ ಹೋಗಿ ಬೀರುವಿನಲ್ಲಿದ್ದ ಒಡವೆ ಕದ್ದಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.