ತುರುವೇಕೆರೆ: ಪಟ್ಟಣದಾದ್ಯಂತ ಗುರುವಾರ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಯಿತು.
ಗುರುವಾರ ಸಂಜೆ ದಿಢೀರನೆ ಜಿಟಿಜಿಟಿ ಹನಿಯಂತೆ ಪ್ರಾರಂಭವಾದ ಮಳೆ ಕ್ರಮೇಣ ಬಿರುಸಿನಲ್ಲಿ ಅರ್ಧ ತಾಸು ಸುರಿಯಿತು. ಎರಡು ದಿನಗಳಿಂದ ಬಿಸಿಲಿನ ತಾಪದಿಂದ ಹೈರಾಣಾಗಿದ್ದ ಜನರಿಗೆ ಮಳೆ ಮುದ ನೀಡಿತು.
ಮಳೆ ನಿಂತರೂ ತುಂತುರು ಹನಿ ಬೀಳುತ್ತಲೇ ಇತ್ತು. ಬೈಕ್, ಇನ್ನಿತರ ವಾಹನ ಸವಾರರು ಮಳೆಯಲ್ಲೇ ಸಾಗಿದರು. ಕೆಲವರು ಕೊಡೆ ಆಶ್ರಯಿಸಿದರು. ಉತ್ತಮ ಮಳೆಯಿಂದ ರಸ್ತೆ ಮತ್ತು ಚರಂಡಿಗಳಲ್ಲಿ ನೀರು ಹರಿಯಿತು. ಮಳೆಯಿಂದ ಪಟ್ಟಣದ ತಾಲ್ಲೂಕು ಕಚೇರಿ ವೃತ್ತ, ಮಾಯಸಂದ್ರ, ತಿಪಟೂರು, ಬಾಣಸಂದ್ರ ಮತ್ತು ದಬ್ಬೇಘಟ್ಟ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ವಸ್ತುಗಳನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಪರದಾಡಿದರು.
ಪಟ್ಟಣಕ್ಕೆ ಹೊಂದಿಕೊಂಡಂತಿರುವ ಹಾವಾಳ, ತಾವರೇಕೆರೆ, ಕೊಟ್ಟೂರನ ಕೊಟ್ಟಿಗೆಯಲ್ಲಿ ಸಣ್ಣ ಪ್ರಮಾಣದ ಸೋನೆ ಮಳೆ ಬಿದ್ದಿದೆ. ಈ ಮಳೆಯಿಂದ ಮುನಿಯೂರು ಗದ್ದೆ ಬಯಲಿನಲ್ಲಿ ಭತ್ತ ನಾಟಿ ಮಾಡಿದ್ದ ರೈತರಿಗೆ ಅನುಕೂಲವಾಗಿದೆ ಎಂದು ರೈತರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.