ಪಾವಗಡ: ಇತಿಹಾಸದ ಬಗ್ಗೆ ಮಾಹಿತಿ ಇದ್ದಲ್ಲಿ, ಭವಿಷ್ಯದ ಹಾದಿ ಸುಗಮವಾಗಿರುತ್ತದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ದೇವರ ಕೊಂಡಾರೆಡ್ಡಿ ಹೇಳಿದರು.
ತಾಲ್ಲೂಕಿನ ನಿಡಗಲ್ಲಿನಲ್ಲಿ ಭಾನುವಾರ ವಾಲ್ಮೀಕಿ ಮಹರ್ಷಿ ಆಶ್ರಮ ಆಯೋಜಿಸಿದ್ದ ‘ನಿಡುಗಲ್ಲು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ’ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಇತಿಹಾಸದಲ್ಲಿ ಅನೇಕರ ತ್ಯಾಗ ಬಲಿದಾನದ ಕಥೆಗಳಿವೆ. ಪ್ರತಿಯೊಂದು ಊರಿನ ಹಿನ್ನೆಲೆ, ಪ್ರತಿಯೊಂದು ಕೋಟೆ, ಕೊತ್ತಲು, ದೇವಾಲಯ, ಕೆರೆ, ಕಲ್ಲುಗಳಿಗೆ ಒಂದೊಂದು ಕಥೆ ಇರುತ್ತದೆ. ಈ ಘಟನಾ ವಿಷಯವನ್ನು ಶೋಧಿಸುವುದೇ ಇತಿಹಾಸದ ಮುಖ್ಯ ಕಾರ್ಯ ಎಂದರು.
ನಿಡುಗಲ್ಲಿನ ಬಗ್ಗೆ ಸುಮಾರು 30 ಶಾಸನಗಳಲ್ಲಿ ಮಾಹಿತಿ ಲಭ್ಯವಿದೆ. ನೀರು ಮತ್ತು ದೇವಾಲಯ ಇತಿಹಾಸದ ಮೂಲ ಅಂಶಗಳು. ಬಾವಿ ಕೆರೆಗಳ ನಾಶದಿಂದ ಜನವಸತಿ ನಾಶವಾಗುತ್ತದೆ. ದೇವಾಲಯಗಳ ನಾಶದಿಂದ ಸ್ಥಳೀಯ ಪರಂಪರೆ ಹಾಳಾಗುತ್ತದೆ. ಹಾಗಾಗಿ ಕೆರೆ, ದೇವಾಲಯಗಳ ಜೀರ್ಣೋದ್ಧಾರ ನಡೆಯಬೇಕು
ಎಂದರು.
ವಾಲ್ಮೀಕಿ ಆಶ್ರಮದ ಪೀಠಾಧ್ಯಕ್ಷ ವಾಲ್ಮೀಕಿ ಸಂಜಯಕುಮಾರ ಸ್ವಾಮೀಜಿ, ನಿಡಗಲ್ಲು ಧಾರ್ಮಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಹೊಂದಿರುವ ನೆಲೆ. ಎಲ್ಲರ ಸಹಕಾರದೊಂದಿಗೆ ಸ್ಥಳೀಯ ಇತಿಹಾಸ ಸ್ಮಾರರಕಗಳನ್ನು ರಕ್ಷಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಸಂಶೋಧಕ ಡಾ.ಯೋಗೀಶ್ವರಪ್ಪ, ಪಾಳೇಗಾರಿಕೆ ಎನ್ನುವುದು ವಿಜಯನಗರದ ಕಾಲದ ಅರಸರು ನೀಡುತ್ತಿದ್ದ ಪದವಿ. ಸಾಮ್ರಾಜ್ಯದ ಅಧಿಕಾರ ವಿಕೇಂದ್ರೀಕರಣವನ್ನು ಮಾಡಿದಾಗ ಸ್ಥಳೀಯ ಆಡಳಿತಕ್ಕಾಗಿ ಆಯ್ಕೆಯಾದವರು ಪಾಳೆಗಾರರು. ಈ ಪಾಳೆಯಗಾರರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರಲಿಲ್ಲ ಎಂದರು.
ಡಾ.ನಂಜುಂಡಸ್ವಾಮಿ, ಡಾ.ವಿ.ಆರ್. ಚೆಲುವರಾಜನ್, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ನಿವೃತ್ತ ಜೈಲರ್ ಹರ್ತಿಕೋಟೆ ವೀರೇಂದ್ರ ಸಿಂಹ, ಜನಪದ ಸಾಹಿತಿ ಸಣ್ಣನಾಗಪ್ಪ, ಡಾ.ಕೆ.ವಿ.ಮುದ್ದುವೀರಪ್ಪ, ಡಾ.ಗೋವಿಂದರಾಯ, ಡಾ.ಬಗ್ಗನಡು ನಾಗಭೂಷಣ್,
ಹೊ.ಮ.ನಾಗರಾಜು, ಹೊಟ್ಟೆ ಬೊಮ್ಮನಹಳ್ಳಿ ತಿಮ್ಮಾರೆಡ್ಡಿ, ಮುಖಂಡರಾದ ಜಗನ್ನಾಥ, ಗಿರಿಜನ ನಾಯಕ ನೌಕರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ಪ್ರಭಾಕರ್, ಎಪಿಎಂಸಿ ಅಧ್ಯಕ್ಷ ಮಾರಣ್ಣ, ಡಾ.ಎಚ್.ಕೆ. ನರಸಿಂಹ ಮೂರ್ತಿ, ಅಂಬಿಕಾ ರಮೇಶ್, ಬೆಳ್ಳಿಬಟ್ಲು ಜಯಮ್ಮ, ಲೋಕೇಶ್ ಪಾಳೇಗಾರ್, ಓಂಕಾರನಾಯಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.