ADVERTISEMENT

ಪಾವಗಡ: 18 ತಬ್ಲಿಗಿಗಳ ಕ್ವಾರಂಟೈನ್

ಗ್ರಾಮಸ್ಥರ ವಿರೋಧ, ಮನವೊಲಿಸಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 7 ಮೇ 2020, 9:38 IST
Last Updated 7 ಮೇ 2020, 9:38 IST
ಪಾವಗಡ ಕುರುಬರಹಳ್ಳಿ ಬಳಿಯ ವಸತಿ ನಿಲಯದ ಬಳಿಗೆ ಮಂಗಳವಾರ ರಾತ್ರಿ ತಬ್ಲಿಗಿಗಳನ್ನು ಕರೆತರಲಾಯಿತು
ಪಾವಗಡ ಕುರುಬರಹಳ್ಳಿ ಬಳಿಯ ವಸತಿ ನಿಲಯದ ಬಳಿಗೆ ಮಂಗಳವಾರ ರಾತ್ರಿ ತಬ್ಲಿಗಿಗಳನ್ನು ಕರೆತರಲಾಯಿತು   

ಪಾವಗಡ: ತಬ್ಲಿಗಿ ಜಮಾತ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದಗುಜರಾತ್‌ನಿಂದ ಬಂದಿದ್ದ 18 ಮಂದಿಯನ್ನು ತಾಲ್ಲೂಕಿನ ಕುರುಬರಹಳ್ಳಿ ಗೇಟ್ ಬಳಿಯ ವಿದ್ಯಾರ್ಥಿ ನಿಲಯದಲ್ಲಿ ಮಂಗಳವಾರ ರಾತ್ರಿ ಕ್ವಾರಂಟೈನ್ ಮಾಡಲಾಗಿದೆ.

ತಬ್ಲಿಗಿಗಳನ್ನು ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡುವ ವಿಚಾರ ತಿಳಿದು ಕುಟುಬರಹಳ್ಳಿ, ಬಾಲಮ್ಮನಹಳ್ಳಿ, ನಲಿಗಾನಹಳ್ಳಿ ಗುಂಡಾರ್ಲಹಳ್ಳಿ ಗ್ರಾಮಸ್ಥರು ವಸತಿ ನಿಲಯದ ಬಳಿ ಬಂದು ಕೂಡಲೇ ಅವರನ್ನು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿದರು.

ಸದ್ಯ ತಾಲ್ಲೂಕಿನಲ್ಲಿ ಯಾವುದೇ ಕೊರೊನಾ ಸೋಂಕಿನ ಪ್ರಕರಣಗಳಿಲ್ಲ. ಈಗ ಗುಜರಾತ್‌ನಿಂದ ಬಂದಿದ್ದ ಇವರನ್ನು ವಸತಿ ನಿಲಯದಲ್ಲಿ ಇರಿಸುವುದರಿಂದ ಸುತ್ತ ಮುತ್ತಲ ಗ್ರಾಮಗಳಿಗೆ ಸಮಸ್ಯೆಯಾಗುತ್ತದೆ. ವೈ.ಎನ್.ಹೊಸಕೋಟೆಯವರನ್ನು ಇಲ್ಲಿ ಕ್ವಾರಂಟೈನ್ ಮಾಡಲು ಬಿಡುವುದಿಲ್ಲ ಎಂದು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು.

ADVERTISEMENT

ರಾತ್ರಿಯಿಡೀ ವಸತಿ ನಿಲಯದ ಬಳಿಯೇ ಗ್ರಾಮಸ್ಥರು ಇದ್ದರು. ನಂತರ ಅಧಿಕಾರಿಗಳು ಈಗಾಗಲೇ ಇವರಿಗೆ ತಪಾಸಣೆ ನಡೆಸಲಾಗಿದೆ ಮತ್ತೊಮ್ಮೆ ತಪಾಸಣೆ ನಡೆಸಲಾಗುವುದು. ಯಾರಿಗೂ ಸೋಂಕು ದೃಢಪಟ್ಟಿಲ್ಲ ಎಂದು ಗ್ರಾಮಸ್ಥರ ಮನವೊಲಿಸಿದರು.

18 ಮಂದಿಯಲ್ಲಿ 13 ಮಂದಿ ತಾಲ್ಲೂಕಿನ ವೈ.ಎನ್.ಹೊಸಕೋಟೆಯವರು. ಉಳಿದ 5 ಮಂದಿ ಆಂಧ್ರ ಪ್ರದೇಶದವರು. ಆಂಧ್ರದ 5 ಮಂದಿ ವೈ.ಎನ್.ಹೊಸಕೋಟೆ ಯವರೊಂದಿಗೆ ಗುಜರಾತ್‌ಗೆ ಹೋಗಿದ್ದರು. ಅಹಮದಾಬಾದ್‌ನಿಂದ ಬಂದ ಇವರನ್ನು ಚಿತ್ರದುರ್ಗ ಚೆಕ್ ಪೋಸ್ಟ್ ಬಳಿ ಪೊಲೀಸರು ತಡೆದಿದ್ದಾರೆ. ನಂತರ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಬ್ಲಿಗಿಗಳು ಬರುವ ವಿಚಾರ ತಿಳಿದು ತಾಲ್ಲೂಕು ಮಟ್ಟದ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಂಡರು.

ಉಪವಿಬಾಗಾಧಿಕಾರಿ ಡಾ.ಕೆ.ನಂದಿನಿದೇವಿ, ಡಿವೈಎಸ್‌ಪಿ ಪ್ರವೀಣ್ ಸ್ಥಳಕ್ಕೆ ಬಂದು ಪರಿಶೀಲಿಸಿದರು. ತಹಶೀಲ್ದಾರ್ ವರದರಾಜು, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ತಿರುಪತಯ್ಯ, ಮುಖ್ಯಾಧಿಕಾರಿ ನವೀನ್ ಚಂದ್ರ, ಕಂದಾಯ ನಿರೀಕ್ಷಕ ರಾಜಗೋಪಾಲ್, ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.