ತುಮಕೂರು: ತುಮಕೂರು ವಿಶ್ವವಿದ್ಯಾನಿಲಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ 136ನೇ ಜನ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಕುಲಪತಿ ವೈ.ಎಸ್.ಸಿದ್ದೇಗೌಡ, ‘ನಾಲ್ವಡಿ ಕೃಷ್ಣರಾಜ ಒಡೆಯರು ಸಾಮಾಜಿಕ ನ್ಯಾಯದ ಹರಿಕಾರರು. ಸಂಸ್ಥಾನದಲ್ಲಿ ಎಲ್ಲ ಜನರಿಗೂ ಸಮಾನ ಅವಕಾಶ ಕಲ್ಪಿಸಿದ್ದರು. ಕೆಳ ವರ್ಗಗಳಿಗೂ ಆಡಳಿತದಲ್ಲಿ ಪ್ರಾತಿನಿಧ್ಯ ಕಲ್ಪಿಸಿದ್ದರು. ಶೋಷಿತರ ಮಕ್ಕಳಿಗಾಗಿ ವಸತಿನಿಲಯ ಸ್ಥಾಪಿಸಿ ಶಿಕ್ಷಣಕ್ಕೆ ಒತ್ತು ನೀಡಿದ್ದರು’ ಎಂದರು.
ಮಹಿಳಾ ಶಿಕ್ಷಣಕ್ಕೆ ಒತ್ತುನೀಡಿ ಮಹಾರಾಣಿ ಕಾಲೇಜು ಆರಂಭಿಸಿದರು. ಶಾಲಾ, ಕಾಲೇಜು ಆರಂಭಿಸಿ ಬೌದ್ಧಿಕ ಬೆಳವಣಿಗೆಗೆ ಬುನಾದಿ ಹಾಕಿದರು. ಬಸವಿ, ಗೆಜ್ಜೆಪೂಜೆ, ವೇಶ್ಯಾವಾಟಿಕೆಯಂತಹ ಸಾಮಾಜಿಕ ಪಿಡುಗು ರದ್ದುಮಾಡಲು ಕಾನೂನು ರೂಪಿಸಿದರು ಎಂದು ಸ್ಮರಿಸಿದರು.
ಬೆಂಗಳೂರು ನಗರಕ್ಕೆ ವಿದ್ಯುತ್ ಸಂಪರ್ಕ. ಶಿವನ ಸಮುದ್ರ ವಿದ್ಯುತ್ ಉತ್ಪಾದನಾ ಕೇಂದ್ರ ಆರಂಭ, ಕೋಲಾರ ಚಿನ್ನದ ಗಣಿ, ಚಿತ್ರದುರ್ಗದ ವಾಣಿವಿಲಾಸ ಸಾಗರ ಜಲಾಶಯ ನಿರ್ಮಾಣ ಮಾಡಿದರು. ಆಸ್ಥಾನದ ಆಭರಣಗಳನ್ನು ಒತ್ತೆಯಿಟ್ಟು ಕನ್ನಂಬಾಡಿಯಲ್ಲಿ ಕೃಷ್ಣರಾಜ ಸಾಗರ ಪೂರ್ಣಗೊಳಿಸಿದರು. ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಿದ ಕೀರ್ತಿ ಸಲ್ಲುತ್ತದೆ ಎಂದರು.
ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಜಿ.ಬಸವರಾಜು, ವಿಶೇಷ ಘಟಕ ಯೋಜನೆ ಸಂಚಾಲಕ ಕೆ.ಮಹಾಲಿಂಗ, ಪ್ರಾಧ್ಯಾಪಕರಾದ ನಿತ್ಯಾನಂದ ಶೆಟ್ಟಿ, ಡಾ.ನಾಗಭೂಷಣ ಬಗ್ಗನಡು, ಕೆ.ಜಿ.ಪರಶುರಾಮ, ಕರಿಯಣ್ಣ, ಶಿವಲಿಂಗಸ್ವಾಮಿ, ಜ್ಯೋತಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.