ADVERTISEMENT

ಕುಣಿಗಲ್: ಪರಿಶಿಷ್ಟರ ಕುಂದುಕೊರತೆ ಆಲಿಸಲು ಬಂದ ಎಎಸ್‌ಪಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 6:56 IST
Last Updated 15 ಅಕ್ಟೋಬರ್ 2025, 6:56 IST
ಕುಣಿಗಲ್‌ನಲ್ಲಿ ಪರಿಶಿಷ್ಟರ ಕುಂದುಕೊರತೆ ಸಭೆ ನಡೆಯಿತು
ಕುಣಿಗಲ್‌ನಲ್ಲಿ ಪರಿಶಿಷ್ಟರ ಕುಂದುಕೊರತೆ ಸಭೆ ನಡೆಯಿತು   

ಕುಣಿಗಲ್: ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್ ಮಂಗಳವಾರ ಕುಣಿಗಲ್ ಪೊಲೀಸ್ ಠಾಣೆಗೆ ಬಂದು ಪರಿಶಿಷ್ಟರ ಕುಂದುಕೊರತೆ ಆಲಿಸಿದರು.

ಡಿವೈಎಸ್‌ಪಿ ಮತ್ತು ಅಮೃತೂರು ಪಿಎಸ್ಐ ದಲಿತರ ಸಮಸ್ಯೆಗಳಿಗೆ ಸ್ಪಂದಿಸದೆ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಭಾನುವಾರ ಅಮೃತೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಪರಿಶಿಷ್ಟರ ಕುಂದುಕೊರತೆ ಸಭೆಯನ್ನು ದಲಿತ ಮುಖಂಡರು ಬಹಿಷ್ಕರಿಸಿದ್ದರು. ಈ ಹಿನ್ನಲೆಯಲ್ಲಿ ಎಸ್‌ಪಿ ಭೇಟಿ ನೀಡಿದ್ದರು.

ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡರು, ಇತ್ತೀಚೆಗೆ ತಾಲ್ಲೂಕಿನ ಹೆಗ್ಗಡತಿಹಳ್ಳಿ, ಚಾಕೇನಹಳ್ಳಿ, ಕೊಡವತ್ತಿ, ಹೊನ್ನಮಾಚನಹಳ್ಳಿ ಮತ್ತು ವಾಣಿಗೆರೆಗಳಲ್ಲಿ ನಡೆದಿರುವ ದಲಿತರ ಮೇಲಿನ ದೌರ್ಜನ್ಯಗಳಲ್ಲಿ ಡಿವೈಎಸ್‌ಪಿ ಓಂಪ್ರಕಾಶ್ ಮತ್ತು ಅಮೃತೂರು ಪಿಎಸ್ಐ ವರ್ತನೆಗಳನ್ನು ಖಂಡಿಸಿ ಮಾಹಿತಿ ನೀಡಿದರು. 

ADVERTISEMENT

ಪೊಲೀಸ್ ಅಧಿಕಾರಿಗಳು ದಲಿತರೊಂದಿಗೆ ಸೌಜನ್ಯದಿಂದ ವರ್ತಿಸದೆ, ಪೂರ್ವಾಗ್ರಹ ಪೀಡಿತರಾಗಿ ವರ್ತಿಸುತ್ತಿದ್ದಾರೆ. ನ್ಯಾಯ ಕೇಳಲು ಹೋದವರಿಗೆ ಬೆದರಿಕೆ ಹಾಕಿ ಠಾಣೆಯಿಂದ ಹೊರಗಟ್ಟುತ್ತಿದ್ದಾರೆ ಎಂದು ದೂರಿದರು.

ಸಮಸ್ಯೆಗಳನ್ನು ಆಲಿಸಿದ ಎಎಸ್‌ಪಿ ಪುರುಷೋತ್ತಮ್, ಕೆಳ ಹಂತದ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ತೋರದ ಕಾರಣ ಸಮಸ್ಯೆಗಳು ಹೆಚ್ಚಾಗಿದೆ. ಇನ್ನೂ ಡಿವೈಎಸ್‌ಪಿ ಸ್ಥಳಗಳಿಗೆ ತೆರಳಿ, ಸಮಸ್ಯೆಗಳನ್ನು ಅರಿತು ಕಾರ್ಯನಿರ್ವಹಿಸಿದಾಗ ಸಮಸ್ಯೆಗಳು ಕಡಿಮೆಯಾಗುತ್ತದೆ. ಜನಸ್ನೇಹಿ ವರ್ತನೆ ರೂಢಿಸಿಕೊಳ್ಳಬೇಕು. ದಲಿತ ಮುಖಂಡರು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪರಿಹಾರ ಕಂಡುಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಯಲ್ಲಿರುವ ಪರಿಶಿಷ್ಟರ ಕಾಲೊನಿಗಳಿಗೆ ತೆರಳಿ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು. ಕಾನೂನು ಇರುವುದೇ ಸಮಸ್ಯೆಗಳನ್ನು ಬಗೆಹರಿಸಿ ಶಾಂತಿ, ವ್ಯವಸ್ಥಿತ ಸಮಾಜ ನಿರ್ಮಾಣಕ್ಕೆ ಎಂದರು.

ಡಿವೈಎಸ್‌ಪಿ ಓಂ ಪ್ರಕಾಶ್ ಮಾತನಾಡಿ, ಕಾನೂನು ಪ್ರಕಾರ ಕಾರ್ಯನಿರ್ವಹಿಸುವಾಗ ಕೆಲವರಿಗೆ ಅನುಕೂಲವಾಗಿದೆ. ಕೆಲವರಿಗೆ ಅನಾನುಕೂಲವಾಗಿದೆ ಎಂದರು.

ತಾಲ್ಲೂಕಿನಲ್ಲಿ ಹತ್ತುಹದಿನೈದು ವರ್ಷದಿಂದ ಬೇರುಬಿಟ್ಟಿರುವ ಪೊಲೀಸರನ್ನು ಮೊದಲು ವರ್ಗಾವಣೆ ಮಾಡಿ ಎಂದು ದಲಿತ ಮುಖಂಡ ಬಿ.ಜಿ.ಶ್ರೀನಿವಾಸ್ ಆಗ್ರಹಿಸಿದರು.

ಸಿಪಿಐ ಮಾಧ್ಯನಾಯಕ್, ನವೀನ್ ಗೌಡ ಹಾಗೂ ದಲಿತ್ ನಾರಾಯಣ್, ರಾಮಲಿಂಗಯ್ಯ, ರಾಜು, ಮಡಕೆಹಳ್ಳಿ ರಾಮಕೃಷ್ಣ, ಪ್ರಶಾಂತ್ಗವಿ, ಬಿ.ಜಿ ಗಂಗಾಧರ್, ರಾಮಚಂದ್ರಯ್ಯ ಶ್ರೀನಿವಾಸ್ ಹಾಜರಿದ್ದರು.

ಮಾತಿನ ಚಕಮಕಿ
ಸಭೆಯಲ್ಲಿ ಡಿವೈಎಸ್‌ಪಿ ಮತ್ತು ಅಮೃತೂರು ಶಮಂತ್ ಗೌಡ ವಿರುದ್ಧ ಅಧಿಕಾರಿಗಳಿಗೆ ದೂರು ಸಲ್ಲಿಸುತ್ತಿದ್ದಾಗ ದಲಿತ ಮುಖಂಡರಾದ ಯಡವಾಣಿ ಶ್ರೀನಿವಾಸ್ ಮತ್ತು ದಾಸನಪು ವರದರಾಜು ಅವರು ಡಿವೈಎಸ್‌ಪಿ ಪರ ಮಾತನಾಡಿದರು. ಇದರಿಂದ ಸಿಟ್ಟಿಗೆದ್ದ ದಲಿತ ಮುಖಂಡರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಅಧಿಕಾರಿಗಳ ಸಮ್ಮುಖದಲ್ಲಿ ಕೈ ಮಿಲಾಯಿಸುವ ಮಟ್ಟಕ್ಕೆ ಹೋದಾಗ ಪೊಲೀಸರು ಇಬ್ಬರನ್ನೂ ಸಭೆಯಿಂದ ಹೊರಗೆಳೆದುಕೊಂಡು ಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.