ಕುಣಿಗಲ್: ಕಸಬಾ ಹೋಬಳಿ ಹೇರೂರು ಗ್ರಾಮದಲ್ಲಿ ಜಮೀನು ವಿವಾದದ ಕಾರಣ ಮೂರು ಎಕರೆಯಲ್ಲಿದ್ದ ಅಡಿಕೆ, ತೆಂಗು, ಬಾಳೆ, ಸೀಬೆ ಗಿಡಗಳನ್ನು ಕತ್ತರಿಸಿ ಹಾಕಲಾಗಿದೆ.
ಹೇರೂರು ಗ್ರಾಮದ ದಿವಂಗತ ಹನುಮಯ್ಯ ಎಂಬುವವರಿಗೆ ಸೇರಿದ ಮೂರು ಎಕರೆಯಲ್ಲಿ ಅವರ ಮಗ ನಾಗರಾಜ ಕಳೆದ ಹಲವು ವರ್ಷಗಳಿಂದ ಉಳುಮೆ ಮಾಡುತ್ತಿದ್ದರು. ಇವರ ಸಂಬಂಧಿ ರಾಮಣ್ಣ ಎಂಬುವವರ ಜತೆ ಈ ಜಮೀನು ವಿವಾದ ಇದೆ. ಈ ಪ್ರಕರಣ ನ್ಯಾಯಾಲಯದಲ್ಲಿ ಇದೆ.
ನಾಗರಾಜ 800 ಅಡಿಕೆ, 200 ತೆಂಗಿನ ಗಿಡ ನೆಟ್ಟು ಕಳೆದ ನಾಲ್ಕು ವರ್ಷಗಳಿಂದ ಪೋಷಿಸುತ್ತಿದ್ದರು. ಬಾಳೆ ಹಾಗೂ ಸೀಬೆ ಗಿಡಗಳನ್ನು ಇತ್ತೀಚೆಗೆ ನೆಟ್ಟಿದ್ದರು.
ಬುಧವಾರ ಬೆಳಿಗ್ಗೆ ಜಮೀನಿಗೆ ನೀರು ಹರಿಸಲು ನಾಗರಾಜ ಬಂದಾಗ, ಸಸಿಗಳನ್ನು ನಾಶ ಮಾಡಿರುವುದು ಕಂಡು ಬಂದಿದೆ. ಸಂಜಯ ಮತ್ತಿತರರ ವಿರುದ್ಧ ನಾಗರಾಜ್ ಕುಣಿಗಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಪಿಎಸ್ಐ ವಿಕಾಸಗೌಡ ಸ್ಥಳ ಪರಿಶೀಲಿಸಿದರು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅನಂದ ಪಟೇಲ್, ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.