ತುಮಕೂರು: ಕುವೆಂಪು ಅವರು ಕ್ರಾಂತಿ ಕವಿಯಾಗಿ ಸಾಮಾಜಿಕ ಅನ್ಯಾಯಗಳನ್ನು ನಿರ್ಭಯವಾಗಿ ಪ್ರತಿಭಟಿಸಿ, ಸಾಮಾಜಿಕ ಜವಾಬ್ದಾರಿ ಮತ್ತು ಕಳಕಳಿಯನ್ನು ಪ್ರದರ್ಶಿಸಿದ್ದರು ಎಂದು ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಗೋವಿಂದರಾಯ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಕೇಂದ್ರ ಗ್ರಂಥಾಲಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಟ್ಯಾಕಲ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಕನ್ನಡ ಸಾಹಿತ್ಯ ಸಂವಾದ ಮಾಲೆ-2, ರಾಷ್ಟ್ರಕವಿ ಕುವೆಂಪು ಸ್ಮರಣೆಯ ಕಾರ್ಯಕ್ರಮದಲ್ಲಿ ‘ಕುವೆಂಪು ಬದುಕು-ಬರಹ’ ಕುರಿತ ಉಪನ್ಯಾಸ ನೀಡಿದರು.
ಕುವೆಂಪು ಅವರ ಸಾಹಿತ್ಯದಲ್ಲಿ ಜೀವಪರ ಧೋರಣೆ ಇದೆ. ಸಮೃದ್ಧತೆ, ವಿವಿಧತೆ, ಪರಿಪೂರ್ಣ ಸೃಜನಶೀಲ ಸಾಮರ್ಥ್ಯ ಮೇಳೈಸಿದ ಪ್ರತಿಭೆ ಅವರದ್ದು. ಸಾಹಿತ್ಯಕ ಅಭಿವ್ಯಕ್ತಿಯ ಜೊತೆಗೆ ಬಡತನ, ಅಜ್ಞಾನ, ಮೂಢನಂಬಿಕೆ, ಶೋಷಣೆಯ ವಿರುದ್ಧದ ದನಿಯಾಗಿ ಅವರ ಕೃತಿಗಳು ರಚನೆಯಾಗಿವೆ ಎಂದು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಜಿ.ಸಿದ್ಧರಾಮಯ್ಯ ತಾವು ಕುವೆಂಪು ಜೊತೆಗೆ ಕಳೆದ ಅಮೃತ ಕ್ಷಣಗಳನ್ನು ನೆನಪಿಸುತ್ತಾ, ‘ಕನ್ನಡ ನಾಡು-ನುಡಿ ಸಂಸ್ಕೃತಿಗೆ ಕುವೆಂಪು ಕೊಡುಗೆ ಅಪಾರವಾದುದು’ ಎಂದರು.
ಟ್ಯಾಕಲ್ ಸಂಸ್ಥೆಯ ಕಾರ್ಯದರ್ಶಿ ಎಸ್.ಕುಮಾರಸ್ವಾಮಿ, ‘ಕುವೆಂಪು ಕನ್ನಡಕ್ಕೆ ಹೊಸ ನುಡಿಗಟ್ಟು, ಹೊಸ ಕಲ್ಪನೆಗಳನ್ನು ನೀಡಿದರು. ಇಂತಹ ವಿಶ್ವಮಾನವ ಕವಿಯ ಸಾಹಿತ್ಯ ಕೃತಿಗಳನ್ನು ಇಂದಿನ ವಿದ್ಯಾರ್ಥಿಗಳು ಅಗತ್ಯವಾಗಿ ಓದಬೇಕು’ ಎಂದರು.
ನಗರ ಕೇಂದ್ರ ಗ್ರಂಥಾಲಯದ ಸಹಾಯಕ ವಿ.ಪುಷ್ಪ, ನಿವೃತ್ತ ಉಪನ್ಯಾಸಕ ಪ್ರೇಮಾ ಎಸ್. ಕುಮಾರಸ್ವಾಮಿ, ಪರಿಷತ್ತಿನ ಕಾರ್ಯದರ್ಶಿಗಳಾದ ಎಚ್.ಗೋವಿಂದಯ್ಯ, ವಿ.ಪುಷ್ಪ, ಗುಬ್ಬಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎಸ್.ಚೈತಾಲಿ, ಕೆಪಿಟಿಸಿಎಲ್ ಎಂಜಿನಿಯರ್ ಹಂ.ಸಿ. ಕುಮಾರಸ್ವಾಮಿ, ಇಂದಿರಮ್ಮ, ಶಂಕರಪ್ಪ, ಪಾವಗಡ ಲೋಕೇಶ್ ಹಾಗೂ ವಿಶಾಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.