ತುಮಕೂರು:ಸಮಾಜಕಾರ್ಯ ಪಠ್ಯಕ್ರಮದಲ್ಲಿ ಸ್ಥಳೀಯ ವಸ್ತು ವಿಷಯಗಳನ್ನು ಅಳವಡಿಸುವ ಅಗತ್ಯವಿದೆ ಎಂದುಭಾರತೀಯ ಶಿಕ್ಷಣ ಮಂಡಲ್ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮುಕುಲ್ ಕಾನಿಟ್ಕರ್ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ವಿವಿಯ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಮಹಾತ್ಮ ಗಾಂಧಿ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯ,ವಾರ್ಧಾ ಮಹಾರಾಷ್ಟ್ರ ಹಾಗೂ ನಾಗಪುರ ಭಾರತೀಯ ಶಿಕ್ಷಣ ಮಂಡಲ್– ಸಂಯುಕ್ತಾಶ್ರಯದಲ್ಲಿ ’ಸಮಾಜ ಕಾರ್ಯದಲ್ಲಿ ಹೊಸ ಗಡಿರೇಖೆಗಳು, ಭಾರತೀಯ ಸಂದರ್ಭ, ದೃಷ್ಟಿಕೋನಗಳು ಮತ್ತು ಅನುಭವಗಳು’ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜಕಾರ್ಯ ಅಧ್ಯಯನವು ಪಾಶ್ಚಾತ್ಯ ರಾಷ್ಟ್ರಗಳಿಂದ ಎರವಲು ಪಡೆದಿರುವುದರಿಂದ ಸ್ಥಳೀಯ ಸಂಗತಿಗಳಿಗೆ ಅದು ಅನ್ವಯವಾಗುತ್ತಿಲ್ಲ ಎಂದು ಅವರು ಹೇಳಿದರು.
ಈಗಾಗಲೇ ನಮ್ಮ ಭಾರತೀಯ ಸಂಸ್ಕೃತಿ, ಆಚಾರ- ವಿಚಾರ ನೀತಿ ನಿಯಮಗಳು ಜಗತ್ತಿನ ಎಲ್ಲೆಡೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿವೆ.ನಮ್ಮ ಸಂಪ್ರದಾಯ, ನೀತಿ ನಿಯಮ ಮತ್ತು ವೈಶಿಷ್ಟ್ಯ ಪೂರ್ಣ ತತ್ವ ಸಿದ್ಧಾಂತಗಳ ಮೂಲಕ ಹಲವಾರು ಸಮಸ್ಯೆಗಳನ್ನು ಬಗೆಹರಿಸಬಹುದು ಎಂದರು.
ಎಂಜಿಎಫ್ಜಿನ ನಿರ್ದೇಶಕ ಪ್ರೊ.ಮನೋಜ್ ಕುಮಾರ್ ಮಾತನಾಡಿ, ’ಸಮಾಜಕಾರ್ಯ ಶಿಕ್ಷಣವು ಸಾಮಾಜಿಕ ಕ್ರಿಯೆಯ ಮೂಲಕ ಬದಲಾವಣೆಯನ್ನು ತರುವ ದಿಕ್ಕಿನಲ್ಲಿ ಹಲವು ಸಾಮಾಜಿಕ ಸುಧಾರಕರು ಭಾರತೀಯ ಸನ್ನಿವೇಶವನ್ನ ಅರ್ಥೈಸಿಕೊಂಡು ತಮ್ಮದೇ ಆದ ಕೊಡುಗೆ ನೀಡಿದ್ದಾರೆ’ ಎಂದರು.
ದೆಹಲಿ ವಿಶ್ವವಿದ್ಯಾನಿಲಯದ ಡಾ.ವಿಷ್ಣು ಮೋಹನ್ ದಾಸ್, ತುಮಕೂರು ವಿವಿಯ ಕುಲಸಚಿವ ಪ್ರೊ.ಗಂಗಾ ನಾಯ್ಕ್, ಸಮ್ಮೇಳನದ ಆಯೋಜಕ ಡಾ.ಕೆ.ಜಿ.ಪರಶುರಾಮ, ಡಾ.ಬಿ.ರಮೇಶ್, ಡಾ.ಎಂ.ಯು.ಲೋಕೇಶ್, ಸುಜಾತ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.