ತುಮಕೂರು: ‘ಅಟೋ ಚಕ್ರ ಉರುಳಿದರೆ ಮಾತ್ರ ನಮ್ಮ ಜೀವನವೂ ಸಾಗುತ್ತದೆ. ದಿನವೊಂದಕ್ಕೆ ₹ 400– 500 ಆದಾಯ ಸಿಗುತ್ತಿತ್ತು. ಕೊರೊನಾ ಭೀತಿಯಿಂದ ಅಟೋ ಓಡಿಸಲು ಸಾಧ್ಯವಾಗುತ್ತಿಲ್ಲ. ನಾನು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ಅಟೋಗಾಗಿ ಮಾಡಿದ ಸಾಲ ಇನ್ನೂ ₹ 30 ಸಾವಿರ ಕಟ್ಟಬೇಕಿದೆ. ಇದೀಗ ಹಾಲು ತರಲೂ ಪರದಾಡುವಂತಾಗಿದೆ’ ಎನ್ನುತ್ತಾರೆ ಅಟೋ ಚಾಲಕ ಊರುಕೆರೆ ಜನತಾ ಕಾಲನಿಯ ರಂಗಪ್ಪ.
15 ವರ್ಷದಿಂದ ನಗರದಲ್ಲಿ ಅಟೋ ಓಡಿಸುತ್ತಿದ್ದೇನೆ. ದಿನದ ಆದಾಯದಲ್ಲೇ ಕುಟುಂಬದ ನಿರ್ವಹಣೆಯಾಗುತ್ತಿತ್ತು. ನಿಷೇಧಾಜ್ಞೆಯಿಂದ ನಮ್ಮ ಬದುಕು ಕಷ್ಟವಾಗಿದೆ. ಇದೀಗ ಮನೆಯಲ್ಲೇ ಕುಳಿತಿದ್ದೇವೆ ಎನ್ನುತ್ತಾರೆ ಅಟೋ ಚಾಲಕ ಇಮ್ತಿಯಾಜ್ ಪಾಷಾ
ನಗರದಲ್ಲಿ ದಿನನಿತ್ಯ ಸುಮಾರು 5ರಿಂದ 6 ಸಾವಿರ ಅಟೋಗಳು ಓಡಾಡುತ್ತಿತ್ತು. ಇದೀಗ ನಿಷೇಧಾಜ್ಞೆ ಇರುವುದರಿಂದ ಅಟೋಗಳು ಬೀದಿಗಿಳಿಯಲು ಸಾಧ್ಯವಾಗುತ್ತಿಲ್ಲ. ಅಟೋ ಕೊಂಡುಕೊಳ್ಳಲು ಖಾಸಗೀ ಬ್ಯಾಂಕ್ಗಳನ್ನೇ ನಂಬಿ ಸಾಲ ಪಡೆದಿದ್ದ ಸಾವಿರಾರು ಅಟೋ ಚಾಲಕರು ಮುಂದಿನ ದಿನಗಳನ್ನು ಹೇಗೆ ನಿಭಾಯಿಸುವುದು ಎನ್ನುವ ಆತಂಕದಲ್ಲಿದ್ದಾರೆ.
‘ನಗರದಲ್ಲಿ ಅಟೋ ಓಡಿಸಿ ಅದರಿಂದ ಬರುವ ಬಾಡಿಗೆ ಹಣದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದ ಚಾಲಕರು ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆಟೋ ಚಾಲಕರೂ ಸೇರಿದಂತೆ ಅಸಂಘಟಿತ ಕಾರ್ಮಿಕರ ಬದುಕು ದುಸ್ತರವಾಗಿದೆ. ಇಂತಹವರ ಸಂಕಷ್ಟಕ್ಕೆ ಸರ್ಕಾರ ನೆರವಾಗಬೇಕು, ಕೊರೊನಾದ ಆತಂಕ ನಿವಾರಣೆ ಆಗುವವರೆಗೂ ಸರ್ಕಾರ ಆಟೋ ಚಾಲಕರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಹಣ ಹಾಕಬೇಕು.ಆಟೋ ಸಾಲದ ಬಡ್ಡಿ ಮನ್ನಾ ಮಾಡಬೇಕು’ ಎಂದು ಕಾರ್ಮಿಕ ಮುಖಂಡ ಬಿ. ಉಮೇಶ್ ಒತ್ತಾಯಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.