ಕೊಡಿಗೇನಹಳ್ಳಿ (ಮಧುಗಿರಿ ತಾ): ವಿವಿಧ ನಗರಗಳಿಂದ ಹಕ್ಕಿಪಿಕ್ಕಿ ಜನರು ಜನಕಲೋಟಿ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಗಳಿಗೆ ರಾತ್ರೋ ರಾತ್ರಿ ಬಂದು ಸೇರಿಕೊಂಡಿದ್ದಾರೆ. ಅವರನ್ನು ವಾಪಸ್ ಕಳುಹಿಸಿ, ಇಲ್ಲವೇ ಪ್ರತ್ಯೇಕವಾಗಿ ವಸತಿ ವ್ಯವಸ್ಥೆ ಕಲ್ಪಿಸಿ ಎಂದು ಮಂಗಳವಾರ ಜನಕಲೋಟಿ ಗ್ರಾಮಸ್ಥರು ಪ್ರತಿಭಟಿಸಿದರು.
ಗ್ರಾಮದ ಹೊರವಲಯದಲ್ಲಿ 2 ವರ್ಷಗಳಿಂದ ಹಕ್ಕಿಪಿಕ್ಕಿಯ 8 ಕುಟುಂಬಗಳು ವಾಸವಾಗಿವೆ. ಈಗ ಕೊರೊನಾ ಸೋಂಕಿನ ಭೀತಿ ಜನರನ್ನು ಆವರಿಸಿದೆ. ಸಮೀಪದ ಶಿರಾ, ಗೌರಿಬಿದನೂರು ಮತ್ತು ಹಿಂದೂಪುರದಲ್ಲಿ ಸೋಂಕಿನಿಂದ ಮೃತಪಟ್ಟ ಪ್ರಕರಣಗಳು ಇವೆ. ಈ ಸಂದರ್ಭದಲ್ಲಿ ಅದೇ ನಗರಗಳಿಂದ 20 ಜನರು ಗ್ರಾಮಕ್ಕೆ ರಾತ್ರೋ ರಾತ್ರಿ ಬಂದು ಅವರ ಸಂಬಂಧಿಕರನ್ನು ಸೇರಿಕೊಂಡಿದ್ದಾರೆ. ಇದು ಜನರನ್ನು ಮತ್ತಷ್ಟು ಭಯಭೀತರಾಗುವಂತೆ ಮಾಡಿದೆ.
ಇವರನ್ನು ಪರೀಕ್ಷಿಸಿ ಅವರಿಗೆ ಪ್ರತ್ಯೇಕವಾಗಿ ವಸತಿ ಸೌಲಭ್ಯ ಕಲ್ಪಿಸಬೇಕು. ಎಲ್ಲೂ ಓಡಾಡದಂತೆ ನಿಗಾವಹಿಸಬೇಕು. ಇಲ್ಲದಿದ್ದರೆ ಗ್ರಾಮಸ್ಥರೆಲ್ಲ ಸೇರಿ ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಿವು, ಶ್ರೀನಿವಾಸ್, ನಾಗರಾಜು, ಚನ್ನಿಗರಾಮನಾಯಕ, ನವೀನ್, ನರಸಿಂಹಮೂರ್ತಿ, ಜಾನಕಿರಾಮಯ್ಯ, ಜೆ.ಎನ್. ಮಧು, ರವಿ, ತಿಪ್ಪೇಸ್ವಾಮಿ, ನಾಗಕೃಷ್ಣಯ್ಯ, ಮಹೇಶ್, ದೇವರಾಜು, ದಾಳಪ್ಪ, ನಾರಾಯಣಪ್ಪ ಎಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.