ಕುಣಿಗಲ್: ‘ತಾಲ್ಲೂಕಿನ ಕಡೆ ಹರಿಯಬೇಕಾಗಿದ್ದ ಹೇಮಾವತಿ ನೀರು (ಕಾವೇರಿ ಕಣಿವೆ ನೀರು) ಜಿಲ್ಲೆಯ ಕೃಷ್ಣ ಮೇಲ್ದಂಡೆ ಕಡೆ ಹರಿಯುವಾಗ ಕುಣಿಗಲ್ ತಾಲ್ಲೂಕಿನ ಯಾವ ಜನಪ್ರತಿನಿಧಿಗಳು ಅಡ್ಡಿಪಡಿಸದೆ ಸಹಕಾರ ನೀಡಿದ್ದಾರೆ. ಕುಣಿಗಲ್ ಪಾಲಿನ ಹೇಮಾವತಿ ನೀರನ್ನು ಪಡೆಯಲು ಲಿಂಕ್ ಕೆನಾಲ್ ಯೋಜನೆ ಅನುಷ್ಠಾನವಾಗುತ್ತಿದ್ದು, ಜಿಲ್ಲೆಯ ನಾಯಕರು ಅಡ್ಡಿಪಡಿಸದೆ ಸಹಕರಿಸಬೇಕು’ ಎಂದು ಶಾಸಕ ಡಾ. ರಂಗನಾಥ್ ಮನವಿ ಮಾಡಿದರು.
ಬುಧವಾರ ₹45 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಹುತ್ರಿದುರ್ಗ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
‘ತಾಲ್ಲೂಕಿನ ನೀರಾವರಿ ಸಮಸ್ಯೆಗಳಿಗೆ ಲಿಂಕ್ ಕೆನಾಲ್ ಯೋಜನೆ ಶಾಶ್ವತ ಪರಿಹಾರವಾಗಿದ್ದು, ಸ್ಥಳೀಯ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಅಡ್ಡಿಯಾಗುತ್ತಿದ್ದಾರೆ. ಜಿಲ್ಲೆಯ ನಾಯಕರು ಜವಾಬ್ದಾರಿ ನೀಡಿದರೆ ಜಿಲ್ಲೆಯ ಪಾಲಿನ ಹೇಮಾವತಿ ನೀರನ್ನು ಪಡೆದು ತಾಲ್ಲೂಕಿನ ಪಾಲಿನ ನೀರನ್ನು ಸಮನಾಗಿ ಹಂಚುತ್ತೇನೆ’ ಎಂದರು.
ಕಾಂಗ್ರೆಸ್ ಮುಖಂಡ ಅಡಿಟರ್ ನಾಗರಾಜು, ‘ಶಾಸಕ ಬಿ.ಸುರೇಶ್ ಗೌಡ ಕುಣಿಗಲ್ ತಾಲ್ಲೂಕಿನವರಾಗಿದ್ದು, ಕುಣಿಗಲ್ ತಾಲ್ಲೂಕಿಗೆ ಹೇಮಾವತಿ ನೀರು ನೇರವಾಗಿ ಹರಿಸುವ ಲಿಂಕ್ ಕೆನಾಲ್ ಯೋಜನೆಗೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ’ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಹಾಲುವಾಗಿಲು ಸ್ವಾಮಿ, ಹುತ್ರಿದುರ್ಗ ಹೋಬಳಿಯ ನಾಡಕಚೇರಿಗೆ ಸೂಕ್ತ ಕಟ್ಟಡ ನಿರ್ಮಾಣಕ್ಕೆ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಂಜೀವಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣ, ನರೇಗಾ ಸಹಾಯಕ ನಿರ್ದೇಶಕ ಕಾಂತರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೃಷ್ಣವೇಣಿ, ಉಪಾಧ್ಯಕ್ಷ ಕೆಂಪಣ್ಣ, ಗಂಗಶಾನಯ್ಯ, ಶಿವಣ್ಣ, ರಾಮಕೃಷ್ಣ, ಶ್ರೀನಿವಾಸ್, ಪಿಡಿಒ ರಾಜಶೇಖರ, ಮಧುಸೂದನ್, ಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.