ಕುಣಿಗಲ್: ಪಟ್ಟಣದ ಸ್ಟುಡಿಯೊ ಮಾಲೀಕನನ್ನು ಹಾಡುಹಗಲೇ ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದ 7 ಆರೋಪಿಗಳನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಎರಡು ಕಾರು ಮತ್ತು ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಶಿವಪ್ರಸಾದ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸರ್ಜಾಪುರದ ಸಾದಿಕ್, ಗೋರಿಪಳ್ಯದ ಮಹಮ್ಮದ್ ಅಕ್ಬರ್, ಶಾರೂಖ್ ಖಾನೆ, ಶಿವಾಜಿ ನಗರದ ಮಹಮ್ಮದ್ ಮಸೂದ್, ಆನೆಕಲ್ಲು ಮೌಲಾ, ಕತ್ರಿಗುಪ್ಪೆ ಅರುಣ್ ಬಂಧಿತರು.ಇನ್ನೊಬ್ಬ ಆರೋಪಿ ಮುಜ್ಜು ಪತ್ತೆಗಾಗಿ ಶೋಧ ನಡೆದಿದೆ.
ವಕೀಲ ವೃತ್ತಿಯಲ್ಲಿರುವ ಶಿವಪ್ರಸಾದ್, ಆಸ್ತಿಗಾಗಿ ಕುಣಿಗಲ್ನಲ್ಲಿರುವ ಪತ್ನಿಯ ಸಹೋದರಿಯ ಗಂಡ, ಧನುಶ್ರೀ ಸ್ಟುಡಿಯೊ ಮಾಲೀಕ ಪಾಂಡುರಂಗ ಅವರನ್ನು ಕೊಲೆ ಮಾಡಲು ಸಾದಿಕ್ ಮತ್ತು ಇತರರಿಗೆ ಸುಪಾರಿ ನೀಡಿದ್ದರು. ಆರೋಪಿಗಳ ತಂಡ ಜುಲೈ 1ರಂದು ಹಾಡುಹಗಲೇ ಸ್ಟುಡಿಯೊಗೆ ಭಾವಚಿತ್ರ ತೆಗೆಸಿಕೊಳ್ಳುವ ನೆಪದಲ್ಲಿ ಬಂದು ಖಾರದ ಪುಡಿ ಎರಚಿ ಚಾಕುವಿನಿಂದ ತಿವಿದು ಪರಾರಿಯಾಗಿತ್ತು.
ಘಟನೆಯಲ್ಲಿ ಪಾಂಡುರಂಗ ಅವರು ತೀವ್ರ ಗಾಯಗೊಂಡಿದ್ದರು. ಪ್ರಕರಣ ಭೇದಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಜಗದೀಶ್, ಸಿಪಿಐ ನಿರಂಜನ್ ಕುಮಾರ್, ಪಿಎಸ್ಐ ವಿಕಾಸ್ ಗೌಡ, ಶೆಟ್ಟೆಲಪ್ಪ ಮತ್ತು ಸಿಬ್ಬಂದಿ ದೇವರಾಜು, ಸಿದ್ದರಾಜು, ನಂದೀಶಯ್ಯ, ಶ್ರೀನಿವಾಸ್, ಮಂಜುನಾಥ್, ದಯಾನಂದ್, ರೇಣುಕಾ ಪ್ರಸಾದ್, ರವಿಕುಮಾರ್, ಪ್ರೇಮಕುಮಾರಿ, ಹನುಮಂತಯ್ಯ, ರಮೇಶ್ ಮತ್ತು ನರಸಿಂಹರಾಜು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.