ಸಾವು
(ಪ್ರಾತಿನಿಧಿಕ ಚಿತ್ರ)
ತಿಪಟೂರು: ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ನೊಣವಿನಕೆರೆ ಹೋಬಳಿ ಕಾಡಶೆಟ್ಟಿಹಳ್ಳಿ ಗ್ರಾಮದ ಶಂಕರಮೂರ್ತಿ (50) ಅವರ ಶವ ದೊಡ್ಡಗುಣಿ ರಂಭಾಪುರಿ ಮಠ ಸಮೀಪದ ಪಂಪ್ಹೌಸ್ ಬಳಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾದ ಬೆನ್ನಲ್ಲೇ ಅವರ ಪತ್ನಿ ಸುಮಂಗಲಾ ಅವರನ್ನು ಬಂಧಿಸಲಾಗಿದೆ.
ಜೂನ್ 24ರಂದು ‘ನನ್ನ ಚಿಕ್ಕಪ್ಪ ಕಾಣೆಯಾಗಿದ್ದಾರೆ’ ಎಂದು ಶಂಕರಮೂರ್ತಿ ಸಂಬಂಧಿ ಲೋಕೇಶ್ ನೊಣವಿನಕೆರೆ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಶಂಕರಮೂರ್ತಿಯ ಪತ್ನಿ ಸುಮಂಗಲಾ ಹಾಸ್ಟೆಲ್ನಲ್ಲಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿರುವುದನ್ನು ಪತ್ತೆಹಚ್ಚಿದ್ದರು.
ಪತಿ ಕೊಲೆಯಾದ ದಿನ ಹಾಸ್ಟೆಲ್ನಿಂದ ರಾತ್ರಿ 10ರ ಸಮಯದಲ್ಲಿ ಹೊರಹೋಗಿ ಮರುದಿನ ಬೆಳಗ್ಗೆ 5ಗಂಟೆಗೆ ಮತ್ತೆ ಹಾಸ್ಟೆಲ್ಗೆ ವಾಪಸ್ ಬಂದಿರುವುದು ಸಿಸಿ ಟಿವಿಯ ದೃಶ್ಯಾವಳಿಯಲ್ಲಿ ಸೆರೆಯಾಗಿತ್ತು. ಇದನ್ನು ಗಮನಿಸಿ ಸುಮಂಗಲಾ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.