ತುಮಕೂರು: ಜಿಲ್ಲೆಯಾದ್ಯಂತ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸಂಘ ಸಂಸ್ಥೆಗಳು, ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳು, ವಿಶ್ವವಿದ್ಯಾಲಯದಲ್ಲಿ ಗುರುವಾರ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ಕೆಂಪೇಗೌಡರ ವ್ಯಕ್ತಿತ್ವ, ದೂರದೃಷ್ಟಿತನ, ಸಾಧನೆ, ಜನಪರ ಕಾಳಜಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಮುದಾಯಗಳ ಹಿತರಕ್ಷಣೆ, ಬಡವರು, ರೈತರ ಪರ ಕಾಳಜಿ ಸೇರಿದಂತೆ ಒಟ್ಟು ಜನಸಮುದಾಯದ ಏಳಿಗೆ ಕುರಿತು ಅವರಿಗೆ ಇದ್ದ ಕಾಳಜಿಯನ್ನು ವಿದ್ವಾಂಸರು ಕೊಂಡಾಡಿದರು. ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಗೌರವ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಝಖೆ, ಜಿಲ್ಲಾ ಒಕ್ಕಲಿಗ ಸಮಾಜದ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ಧ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ,‘ ಕನ್ನಡ ನಾಡಿಗೆ ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ. ಗ್ರಾಮೀಣ ಪ್ರದೇಶದ ಜನರಿಗಾಗಿ ಕೆರೆ, ಕಟ್ಟೆಗಳನ್ನು ನಿರ್ವಹಿಸಿ ನಾಡಿನ ಸಮಸ್ತ ಜನರ ಮನ ಗೆದ್ದಿದ್ದರು’ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದಶಕ ಬಸವರಾಜ ಅಪ್ಪಿನಕಟ್ಟೆ, ಬೆಳ್ಳಿ ಲೋಕೇಶ್, ಒಕ್ಕಲಿಗ ಸಮುದಾಯದ ಮುಖಂಡರು, ಅಧಿಕಾರಿಗಳಿದ್ದರು.
ಕುಂಚಟಿಗ ಪಂಗಡ ಒಬಿಸಿ ಪಟ್ಟಿಗೆ ಸೇರಿಸಲಿ
ಕೇಂದ್ರದ ಹಿಂದುಳಿದ ವರ್ಗದ (ಒಬಿಸಿ) ಪಟ್ಟಿಯಲ್ಲಿ ಒಕ್ಕಲಿಗ ಸಮುದಾಯದ ಕುಂಚಿಟಿಗ ಉಪಪಂಗಡ ಸೇರ್ಪಡೆ ಮಾಡಲು ಒಕ್ಕಲಿಗ ಸಮುದಾಯ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕೆಪಿಸಿಸಿ ರಾಜ್ಯ ವಕ್ತಾರ ಮುರಳೀಧರ ಹಾಲಪ್ಪ ಹೇಳಿದರು.
ಒಕ್ಕಲಿಗ ಸಮುದಾಯವು ಬಾಲಭವನದಲ್ಲಿ ಗುರುವಾರ ಆಯೋಜಿಸಿದ್ಧ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಬಿಸಿ ಪಟ್ಟಿಯಲ್ಲಿ ಒಕ್ಕಲಿಗ ಸಮುದಾಯದ ಇತರ ಎಲ್ಲ ಉಪಪಂಗಡಗಳು ಇವೆ. ಕುಂಚಿಟಿಗ ಮಾತ್ರ ಇಲ್ಲ. ಇದೊಂದು ಕೊರಗು ಸಮುದಾಯವನ್ನು ಕಾಡುತ್ತಲೇ ಇದೆ. ಉಪಪಂಗಡಗಳು ಒಗಟ್ಟು ಮೆರೆದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ಇಲ್ಲದೇ ನಮ್ಮದೇ ಸಮುದಾಯದ ಒಂದು ಉಪಪಂಗಡಕ್ಕೆ ನಿರಂತರ ಅನ್ಯಾಯ ಆಗುತ್ತದೆ ಎಂದು ಎಚ್ಚರಿಸಿದರು.
ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಸ್ವೀಕರಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ‘ ಕೆಂಪೇಗೌಡರ ಚರಿತ್ರೆಯನ್ನು ಸರಿಯಾದ ರೀತಿಯಲ್ಲಿ ಇತಿಹಾಸದಲ್ಲಿ ದಾಖಲಿಸಿಲ್ಲ. ಅವರ ಸಮಗ್ರ ಇತಿಹಾಸ ಕುರಿತು ವ್ಯವಸ್ಥಿತಿ ಅಧ್ಯಯನ, ಸಂಶೋಧನೆ ನಡೆಯಬೇಕು. ವಾಸ್ತವದ ನೆಲೆಗಟ್ಟಿನಲ್ಲಿ ಇತಿಹಾಸ ಬರೆಯಬೇಕು. ಸಮುದಾಯವನ್ನು ಮೀರಿ ಪ್ರಪಂಚಕ್ಕೆ ಮಾದರಿಯಾಗುವ ವ್ಯಕ್ತಿತ್ವ ಕೆಂಪೇಗೌಡರದ್ದಾಗಿತ್ತು ಎಂಬುದನ್ನು ಅವರ ಆಡಳಿತ ಅವಧಿಯಾದಲ್ಲಿ ಆದ ಕೆಲಸ ಕಾರ್ಯ, ಜನಪರಕ ಕಾಳಜಿಯೇ ಸಾಕ್ಷಿ ಎಂದು ಹೇಳಿದರು.
ಸಮುದಾಯದ ಮುಖಂಡರಾದ ಬೋರೇಗೌಡ,ದೊಡ್ಡಲಿಂಗಪ್ಪ, ಸುಜಾತ ನಂಜೇಗೌಡ, ಗಿರೀಶ್, ಹರೀಶ್, ಬೆಳ್ಳಿ ಲೋಕೇಶ್, ಚಂದ್ರಶೇಖರ್, ಲಕ್ಷ್ಮಿಗೌಡ, ದೊಡ್ಡಲಿಂಗಪ್ಪ, ಸುಧಾಕುಮಾರ್, ಪಾಲಿಕೆ ಸದಸ್ಯರಾದ ಧರಣೇಂದ್ರಕುಮಾರ್, ಶ್ರೀನಿವಾಸ್, ಕುಮಾರ್, ಮಂಜುನಾಥ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಇನ್ಸ್ಪೆಕ್ಟರ್ ಚಂದ್ರಶೇಖರ್ ಇದ್ದರು.
ಅದ್ಧೂರಿ ಮೆರವಣಿಗೆ: ನಗರದ ಬಿಜೆಎಸ್ ವೃತ್ತದಿಂದ ಬಾಲಭವನದವರೆಗೆ ಕೆಂಪೇಗೌಡರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಶಾಸಕ ಷಫಿ ಅಹಮ್ಮದ್, ಒಕ್ಕಲಿಗ ಸಮುದಾಯದ ಹಿರಿಯರು, ಮುಖಂಡರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.