ತಿಪಟೂರು: ತಾಲ್ಲೂಕಿನ ನೊಣವಿನಕೆರೆಯ ಮಲ್ಲೇನಹಳ್ಳಿ ಬಳಿಯ ರಸ್ತೆ ಬದಿಯಲ್ಲಿ 10 ದಿನಗಳ ಹೆಣ್ಣು ಹಸುಗೂಸನ್ನು ತೆಗೆದುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಗಳಿಂದ ಸಾರ್ವಜನಿಕರು ಮಗುವನ್ನು ರಕ್ಷಿಸಿದ್ದಾರೆ.
ಮಗುವನ್ನು ತೆಗೆದುಕೊಂಡು ಓಡಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು (1098) ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದರು.
ಹಿರಿಯೂರು ತಾಲ್ಲೂಕಿನ ಗುಡ್ಡೇಗೌವನಹಳ್ಳಿ ರವಿಕುಮಾರ್ ಮತ್ತು ಅವರ ತಂದೆ ಹಸುಗೂಸನ್ನು ತೆಗೆದುಕೊಂಡು ಬಂದಿದ್ದರು. ಮಗುವಿನ ತಾಯಿಯ ಬಗ್ಗೆ, ಮಗುವಿನ ಬಗ್ಗೆ ಮಾಹಿತಿಯನ್ನು ಕೇಳಿದರೆ ಸರಿಯಾಗಿ ಉತ್ತರಿಸದೇ ಇದ್ದ ಕಾರಣಕ್ಕೆ ಮಗುವನ್ನು ನೊಣವಿನಕೆರೆ ಪೊಲೀಸರ ಸಹಕಾರದೊಂದಿದೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮುಂದಿನ ಕ್ರಮಕ್ಕಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮತ್ತು ಮಕ್ಕಳ ರಕ್ಷಣಾ ಘಟಕಕ್ಕೆ ಮಗುವನ್ನು ಹಸ್ತಾಂತರಿಸಲಾಗಿದೆ.
ಮಕ್ಕಳ ಸಹಾಯವಾಣಿ ನಿರ್ದೇಶಕ ನಂದಕುಮಾರ್ ಪತ್ರಿಕೆಯೊಂದಿಗೆ ಮಾತನಾಡಿ, ಮಗುವಿನ ಬಗ್ಗೆ ವ್ಯಕ್ತಿಗಳು ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಜೊತೆಗೆ ತಂದೆ– ಮಗ ಎಂದು ಮಾತ್ರ ಹೇಳುತ್ತಿದ್ದು, ಮಗುವಿನ ತಾಯಿಯ ಬಗ್ಗೆ ಮಾಹಿತಿ ನೀಡದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆದ್ದರಿಂದ ಮಗುವನ್ನು ರಕ್ಷಣೆ ಮಾಡಿದ್ದು ವಿಚಾರಣೆ ನಡೆಸಿ ತಾಯಿಯ ಬಳಿಗೆ ಸೇರಿಸಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.