ADVERTISEMENT

ಸಿದ್ಧಗಂಗೆಗೆ ಮೂರು ತಿಂಗಳಿನಿಂದ ಇಲ್ಲ ಅಕ್ಕಿ ಭಾಗ್ಯ!

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 11:58 IST
Last Updated 4 ಫೆಬ್ರುವರಿ 2020, 11:58 IST
ಸಿದ್ಧಗಂಗೆ ಮಠದ ವಿದ್ಯಾರ್ಥಿಗಳು (ಚಿತ್ರ: ಪ್ರಜಾವಾಣಿ ಸಂಗ್ರಹ)
ಸಿದ್ಧಗಂಗೆ ಮಠದ ವಿದ್ಯಾರ್ಥಿಗಳು (ಚಿತ್ರ: ಪ್ರಜಾವಾಣಿ ಸಂಗ್ರಹ)   

ತುಮಕೂರು: ಅನ್ನ, ಅಕ್ಷರ, ಜ್ಞಾನ ದಾಸೋಹಕ್ಕೆ ಹೆಸರಾದ ಸಿದ್ಧಗಂಗಾ ಮಠದಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಸಾವಿರಾರು ಮಕ್ಕಳ ಹಸಿವು ನೀಗಿಸುತ್ತಿದ್ದ ಅಕ್ಕಿ ಮತ್ತು ಗೋಧಿಯ ಸರಬರಾಜು ಮೂರು ತಿಂಗಳಿನಿಂದ ನಿಂತಿದೆ.

ಕೇಂದ್ರ ಸರ್ಕಾರದ ಅನ್ನಪೂರ್ಣ ಯೋಜನೆಯಡಿ ಮಠದ ಮಕ್ಕಳಿಗಾಗಿ ಪ್ರತಿ ತಿಂಗಳು 735 ಕ್ವಿಂಟಲ್‌ ಅಕ್ಕಿ, 350 ಕ್ವಿಂಟಲ್‌ ಗೋಧಿಯನ್ನು ಸರಬರಾಜು ಮಾಡಲಾಗುತ್ತಿತ್ತು.

‘ಈ ವಿಷಯದ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆದಿದ್ದೇವೆ. ಸದ್ಯ ಮಠದಲ್ಲಿ ಎರಡು ತಿಂಗಳವರೆಗೆ ಆಗುವಷ್ಟು ದವಸ–ಧಾನ್ಯಗಳ ಸಂಗ್ರಹವಿದೆ. ಆ ಮೇಲೆ ತೊಂದರೆ ಆಗಬಹುದು’ ಎಂದು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಪೂಜ್ಯರು ಲಿಂಗಕ್ಯರಾದಾಗ, ಬಹಳಷ್ಟು ರೈತರು ಭತ್ತವನ್ನೇ ದಾನವಾಗಿ ನೀಡಿದ್ದರು. ಅದನ್ನೆ ಅಕ್ಕಿಯಾಗಿಸಿ ದಾಸೋಹಕ್ಕೆ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ’ ಎಂದು ಅವರು ತಿಳಿಸಿದರು.

‘ಕೇಂದ್ರ ಸರ್ಕಾರದ ಆದೇಶದಂತೆ ಜಿಲ್ಲೆಯ 16 ಸಂಸ್ಥೆಗಳಿಗೆ ಆಹಾರ ಧಾನ್ಯಗಳ ಪೂರೈಕೆ ನಿಂತಿದೆ. ಅದರಲ್ಲಿ ಸಿದ್ಧಗಂಗಾ ಮಠವೂ ಸೇರಿದೆ. ಈ ವಿಷಯ ಜಿಲ್ಲಾ ಉಸ್ತುವಾರಿ ಸಚಿವರಿಗೂ ಗೊತ್ತಿದೆ’ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ಉಪನಿರ್ದೇಶಕ ಶಿವಲಿಂಗಯ್ಯ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.