ತುಮಕೂರು: ‘ವಿಧಾನಸಭೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದಲ್ಲಿ ಯಾವುದೇ ವಿಶೇಷವಿಲ್ಲ. ರಾಜ್ಯ ಸರ್ಕಾರಕ್ಕೆ ಯಾವುದೇ ದೂರದೃಷ್ಟಿಯೂ ಇಲ್ಲ ಎಂಬುದಕ್ಕೆ ನಿದರ್ಶನವಿದ್ದಂತಿದೆ. ಬಡಾಯಿ ಬಿಟ್ಟು ಬೇರೇನಿಲ್ಲ’ ಎಂದು ಗ್ರಾಮಾಂತರ ಶಾಸಕ ಬಿ.ಸುರೇಶ್ಗೌಡ ಟೀಕಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಜಾರಿ ಬಿಟ್ಟು ಬೇರೇನು ಸಾಧನೆ ಮಾಡದ ಸರ್ಕಾರ ಮತ್ತೆಮತ್ತೆ ಅದೇ ಪ್ರಶಂಸೆಯಲ್ಲಿ ಮುಳುಗಿದೆ ಎಂಬುದನ್ನು ರಾಜ್ಯಪಾಲರ ಭಾಷಣದ ಮೂಲಕ ತೋರಿಸಿಕೊಟ್ಟಿದೆ. ಈ ಗ್ಯಾರಂಟಿ ಯೋಜನೆಗಳೂ ಜನರಿಗೆ ಸರಿಯಾಗಿ ತಲುಪಿಲ್ಲ ಎಂದು ಆರೋಪಿಸಿದ್ದಾರೆ.
ರಾಜ್ಯದ 31 ಜಿಲ್ಲೆಗಳ 223 ತಾಲ್ಲೂಕುಗಳಲ್ಲಿ ಭೀಕರ ಬರಪರಿಸ್ಥಿತಿ ಇದೆ. ಈವರೆಗೆ ಪರಿಹಾರ ಕಾರ್ಯಕ್ಕೆ ₹324 ಕೋಟಿ ಖರ್ಚು ಮಾಡಿರುವುದಾಗಿ ಹೇಳಿಕೊಂಡಿದೆ. ಆ ಮೂಲಕ ಬರ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂಬುದನ್ನು ರಾಜ್ಯಪಾಲರ ಭಾಷಣದಲ್ಲಿ ತೋರಿಸಿಕೊಟ್ಟಂತಾಗಿದೆ ಎಂದು ದೂರಿದ್ದಾರೆ.
ಕೇಂದ್ರವನ್ನು ದೂರುವ ಚಾಳಿ ಬಿಟ್ಟಂತೆ ಕಾಣುವುದಿಲ್ಲ. ಅದಕ್ಕಾಗಿ ರಾಜ್ಯಪಾಲರ ಭಾಷಣ ಬಳಸಿಕೊಂಡಿದ್ದು ದುರದೃಷ್ಟಕರ. ರಾಜ್ಯದ ಜನರು ಕಾಂಗ್ರೆಸ್ಗೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತಪಡಿಸಿ ಅಧಿಕಾರಕ್ಕೆ ತಂದಿದ್ದರೂ ತನ್ನ ಬದ್ಧತೆಯನ್ನೇ ಮರೆತು ಆಡಳಿತ ನಡೆಸುತ್ತಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.