ADVERTISEMENT

ನರೇಗಾ ಸಾಧನೆ: ತುಮಕೂರು ಜಿಲ್ಲೆಗೆ 4 ಪ್ರಶಸ್ತಿ

ಮಾರ್ಚ್‌ 24ರಂದು ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2023, 14:23 IST
Last Updated 23 ಮಾರ್ಚ್ 2023, 14:23 IST
ಮಧುಗಿರಿ ತಾಲ್ಲೂಕಿನ ಇಟಕದಿಬ್ಬನಹಳ್ಳಿ ಹತ್ತಿರ ನರೇಗಾ ಯೋಜನೆಯಡಿ ನಿರ್ಮಿಸಿರುವ ಚೆಕ್‌ ಡ್ಯಾಂ
ಮಧುಗಿರಿ ತಾಲ್ಲೂಕಿನ ಇಟಕದಿಬ್ಬನಹಳ್ಳಿ ಹತ್ತಿರ ನರೇಗಾ ಯೋಜನೆಯಡಿ ನಿರ್ಮಿಸಿರುವ ಚೆಕ್‌ ಡ್ಯಾಂ   

ತುಮಕೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 2022-23ನೇ ಸಾಲಿನ ರಾಜ್ಯಮಟ್ಟದ ‘ಮಕ್ಕಳ ಸ್ನೇಹಿ, ರೇಷ್ಮೆ ಸ್ನೇಹಿ, ಶಿಕ್ಷಣ ಸ್ನೇಹಿ, ಜಲ ಸಂಜೀವಿನಿ ಪಂಚಾಯಿತಿ’ ಪುರಸ್ಕಾರಗಳಿಗೆ ಜಿಲ್ಲಾ ಪಂಚಾಯಿತಿ ಭಾಜನವಾಗಿದೆ.

ಮಾರ್ಚ್ 24ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಜಿ.ಪಂ ಸಿಇಒ ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಜಿಲ್ಲೆಯ ಒಟ್ಟು 3,719 ಅಂಗನವಾಡಿ ಕೇಂದ್ರಗಳ ಪೈಕಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅನುದಾನದಲ್ಲಿ 450ಕ್ಕೂ ಹೆಚ್ಚು ಅಂಗನವಾಡಿಗಳನ್ನು ನಿರ್ಮಿಸಲಾಗಿದೆ. ಮಧುಗಿರಿ ತಾಲ್ಲೂಕಿನ ಸಜ್ಜೆಹೊಸಹಳ್ಳಿ ಮತ್ತು ಪಾವಗಡದ ಗುಜ್ಜನಡು ಗ್ರಾ.ಪಂ ವ್ಯಾಪ್ತಿಯಲ್ಲಿ ಶಿಶುಪಾಲನಾ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

2022-23ನೇ ಸಾಲಿನಲ್ಲಿ ಶಿರಾ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ರೇಷ್ಮೆ ಇಲಾಖೆಯಿಂದ 57,172 ಮಾನವ ದಿನಗಳ ಗುರಿ ನಿಗದಿ ಪಡಿಸಿದ್ದು, 65,449 ಮಾನವ ದಿನಗಳನ್ನು ಸೃಜಿಸಿ ಶೇ 114ರಷ್ಟು ಪ್ರಗತಿ ಸಾಧಿಸಿದೆ. ಹೀಗಾಗಿ ‘ರೇಷ್ಮೆ ಸ್ನೇಹಿ’ ಪಂಚಾಯಿತಿ ಪುರಸ್ಕಾರ ಲಭಿಸಿದೆ ಎಂದು ಹೇಳಿದ್ದಾರೆ.

ಪಾವಗಡ ತಾಲ್ಲೂಕಿನ ನಾಗಲಮಡಿಕೆ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ‘ಜಿಯೋ ಸ್ಪೇಷಿಯಲ್’ ತಂತ್ರಜ್ಞಾನ ಬಳಸಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದು, ‘ಜಲ ಸಂಜೀವಿನಿ ಪಂಚಾಯಿತಿ’ ಪುರಸ್ಕಾರಕ್ಕೆ ಆಯ್ಕೆಯಾಗಿದೆ ಎಂದು ವಿವರಿಸಿದ್ದಾರೆ.

ಗುಬ್ಬಿ ತಾಲ್ಲೂಕಿನ ಮಾವಿನಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್, ಅಡುಗೆ ಕೋಣೆ, ಶಾಲಾ ಆಟದ ಮೈದಾನ, ಪೌಷ್ಟಿಕ ಕೈತೋಟ, ಮಳೆ ನೀರು ಕೊಯ್ಲು ಕಾಮಗಾರಿ ಮಾಡಲಾಗಿದೆ. ಇದು ‘ಶಿಕ್ಷಣ ಸ್ನೇಹಿ’ ಪಂಚಾಯಿತಿ ಪುರಸ್ಕಾರಕ್ಕೆ ಭಾಜನವಾಗಿದೆ. 2019-20, 2020-21 ಹಾಗೂ 2021-22ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಜಿಲ್ಲೆಯ 27 ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.