ಗುಬ್ಬಿ: ‘ಸಂಸದರ ಕೃಪೆಯಿಂದ ತಾಲ್ಲೂಕಿಗೆ ಬಂದಿರುವ ತಹಶೀಲ್ದಾರ್ ಸೇರಿದಂತೆ ಕೆಲವು ಅಧಿಕಾರಿಗಳು ಸಾರ್ವಜನಿಕರ ಸೇವೆ ಮಾಡುವ ಬದಲು ಮಧ್ಯವರ್ತಿಗಳನ್ನು ಇಟ್ಟುಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಆರೋಪಿಸಿದರು.
ಪಟ್ಟಣದ 19ನೇ ವಾರ್ಡ್ ಬಿಲ್ಲೆಪಾಳ್ಯದಲ್ಲಿ ₹96 ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ದಕ್ಷ ಆಡಳಿತ ಮಾಡುತ್ತಿದ್ದ ಈ ಹಿಂದಿನ ತಹಶೀಲ್ದಾರ್ ಅವರನ್ನು ಕೆಲವು ಅಧಿಕಾರಿಗಳು ಕುತಂತ್ರ ನಡೆಸಿ ವರ್ಗಾವಣೆ ಆಗುವಂತೆ ಮಾಡಿದರು. ಆ ಸ್ಥಾನಕ್ಕೆ ಲಂಚ ಪಡೆಯುವ ಭ್ರಷ್ಟ ತಹಶೀಲ್ದಾರ್ರನ್ನು ನೇಮಿಸಿದ್ದಾರೆ ಎಂದು ದೂರಿದರು.
‘ಈಗಿನ ತಹಶೀಲ್ದಾರ್ ಮಾವು ಮತ್ತು ಹಲಸು ವರ್ತಕರ ಬಳಿ ಮಂಡಿ ತೆರೆಯುವ ವಿಚಾರಕ್ಕೆ ಲಂಚದ ಬೇಡಿಕೆ ಇಟ್ಟಿದ್ದಾರೆ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಿಲ್ಲೆಪಾಳ್ಯ ವಾರ್ಡ್ನ ಜಮೀನೊಂದರ ದಾಖಲೆ ಮಾಡಲು ಲಕ್ಷಾಂತರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದಾರೆ. ನಾವು ಸಂಸದರಿಗೆ ಹಣಕೊಟ್ಟು ಬಂದಿದ್ದೇವೆ. ಅದಕ್ಕಾಗಿ ಹಣ ಕೇಳುತ್ತೇನೆ ಎಂದು ನೇರವಾಗಿ ಲಂಚ ವಸೂಲಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಎಲ್ಲವನ್ನು ಮೌನವಾಗಿ ನೋಡುತ್ತಿದ್ದೇನೆ. ಸೂಕ್ತ ಸಮಯದಲ್ಲಿ ಉತ್ತರ ಕೊಡುತ್ತೇನೆ. ನಾನು ಈಗ ಪ್ರಶ್ನಿಸಲು ಮುಂದಾದರೆ ಜಾತಿ ವಿರೋಧಿ ಪಟ್ಟ ಕಟ್ಟುತ್ತಾರೆ. ಎಂತಹ ಅಧಿಕಾರಿಗಳನ್ನು ಕರೆ ತಂದೆವು ಎಂದು ಜನಪ್ರತಿನಿಧಿಗಳು ಪಶ್ಚಾತಾಪ ಪಡುವ ಸಮಯ ಹತ್ತಿರದಲ್ಲಿದೆ’ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಜಿ.ಎನ್.ಅಣ್ಣಪ್ಪಸ್ವಾಮಿ, ಬಿ.ಕುಮಾರ್, ಸಿ.ಮೋಹನ್, ರೇಣುಕಾ ಸ್ವಾಮಿ, ಮಮತಾ ಶಿವಪ್ಪ, ಶೌಕತ್ ಆಲಿ, ಲೋಕೇಶ್ ಬಾಬು, ಕುಮಾರಣ್ಣ, ಶಶಿಕುಮಾರ್, ಜಿ.ಎಸ್.ರಾಜಣ್ಣ, ಬಿಲ್ಲೆಪಾಳ್ಯ ನರಸಿಂಹಮೂರ್ತಿ, ನಾಗರಾಜು, ಮಂಜುನಾಥ್, ಡಿ.ರಘು, ಬುಲೆಟ್ ಬಸವರಾಜು ಇದ್ದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.