ADVERTISEMENT

ತುಮಕೂರು: ಶಿವಾಜಿ ಪ್ರತಿಮೆಗೆ ವಿರೋಧ

ಕರುನಾಡ ವಿಜಯಸೇನೆಯಿಂದ ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 8:06 IST
Last Updated 9 ಅಕ್ಟೋಬರ್ 2021, 8:06 IST
ತುಮಕೂರಿನಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಕರುನಾಡ ವಿಜಯಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ಮುಖಂಡರಾದ ಸಿ.ಪಿ.ಸುಧೀರ್, ಬಿ.ಬಿ.ಮಹದೇವಪ್ಪ, ಅನಿಲ್ ನಾಯಕ್, ದೀಕ್ಷಿತ್, ಯಾಸ್ಮಿನ್ ತಾಜ್, ಮಂಜುಳ ಇತರರು ಇದ್ದರು
ತುಮಕೂರಿನಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಕರುನಾಡ ವಿಜಯಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ಮುಖಂಡರಾದ ಸಿ.ಪಿ.ಸುಧೀರ್, ಬಿ.ಬಿ.ಮಹದೇವಪ್ಪ, ಅನಿಲ್ ನಾಯಕ್, ದೀಕ್ಷಿತ್, ಯಾಸ್ಮಿನ್ ತಾಜ್, ಮಂಜುಳ ಇತರರು ಇದ್ದರು   

ತುಮಕೂರು: ನಗರದಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆಗೆ ಮಹಾನಗರ ಪಾಲಿಕೆ ಕೈಗೊಂಡಿರುವ ನಿರ್ಧಾರವನ್ನು ಕೈಬಿಡುವಂತೆ ಆಗ್ರಹಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬ್ರಿಟಿಷರ ವಿರುದ್ಧ ಹೋರಾಡಿದ ಶಿವಾಜಿ ಮಹಾರಾಜರ ಬಗ್ಗೆ ಅಪಾರ ಗೌರವವಿದೆ. ಆದರೆ ರಾಜ್ಯದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಗಡಿ ಭಾಗಗಳಲ್ಲಿ ಮರಾಠಿಗರು ಶಿವಾಜಿ ಪ್ರತಿಮೆ ಸ್ಥಾಪಿಸಿ ಕರ್ನಾಟಕದ ವಿರೋಧಿಗಳಂತೆ ಬಿಂಬಿಸುತ್ತಿದ್ದಾರೆ. ನ. 1ರ ಕನ್ನಡ ರಾಜ್ಯೋತ್ಸವ ದಿನದಂದು ಮರಾಠಿಗರು ಕರಾಳ ದಿನಾಚರಣೆ ಮಾಡುತ್ತಾರೆ. ಭಾಷೆ, ಬಾಂಧವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದರ ವಿರುದ್ಧ ಕನ್ನಡಿಗರು ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಹೀಗಿರುವಾಗ ನಗರದಲ್ಲಿ ಶಿವಾಜಿ ಪ್ರತಿಮೆ ಸ್ಥಾಪಿಸಬಾರದು ಎಂದು ಆಗ್ರಹಿಸಿದರು.

ADVERTISEMENT

ಮೊದಲಿನಿಂದಲೂ ಜಿಲ್ಲೆಯಲ್ಲಿ ಪ್ರತಿಮೆಗಳ ಸ್ಥಾಪನೆ ಸಂಸ್ಕೃತಿ ಇಲ್ಲ. ಬಸವಣ್ಣ, ಅಂಬೇಡ್ಕರ್, ಬಾಬು ಜಗಜೀವನ್‍ ರಾಂ ಪ್ರತಿಮೆ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿದ್ದರೂ ಅದು ಸಾಕಾರಗೊಂಡಿಲ್ಲ ಎಂದು ನೆನಪಿಸಿದ್ದಾರೆ.

ವಿಜಯಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಪಿ.ಸುಧೀರ್, ಜಿಲ್ಲಾ ಗೌರವಾಧ್ಯಕ್ಷ ಬಿ.ಬಿ.ಮಹದೇವಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ನಾಯಕ್, ಯುವ ಘಟಕದ ಅಧ್ಯಕ್ಷ ದೀಕ್ಷಿತ್, ಪದಾಧಿಕಾರಿಗಳಾದ ಸಂದೀಪ್, ಜಿಮ್ ನಾಗರಾಜ್, ಹರೀಶ್, ರುದ್ರೇಶ್, ಯಾಸ್ಮಿನ್ ತಾಜ್, ಮಂಜುಳ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.