ತುಮಕೂರು: ಕೆಎಸ್ಆರ್ಟಿಸಿ ಬಸ್ ಸಂಚಾರ ಇಂದಿನಿಂದ ಆರಂಭವಾಗಿದ್ದು ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ಕಾಯುತ್ತಿರುವ ದೃಶ್ಯ ಕಂಡು ಬಂತು.
ಪ್ರತಿಯೊಬ್ಬ ಪ್ರಯಾಣಿಕರನ್ನು ಗೇಟ್ನಲ್ಲಿಯೇ ತಡೆದು ಅವರ ಹೆಸರು, ಎಲ್ಲಿಂದ-ಎಲ್ಲಿಗೆ, ಮೊಬೈಲ್ ನಂಬರ್ ಪಡೆದು ಅವರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ, ಸ್ಯಾನಿಟೈಸರ್ ನೀಡಿ ಬಸ್ನಿಲ್ದಾಣದ ಒಳಗೆ ಬಿಡಲಾಗುತ್ತಿದೆ. ಥರ್ಮಲ್ ಮೀಟರ್ನಲ್ಲಿ 99 ಡಿಗ್ರಿಗಿಂತ ಅಧಿಕ ಉಷ್ಣಾಂಶ ಕಂಡು ಬಂದವರನ್ನು, 60 ವರ್ಷ ಮೇಲ್ಪಟ್ಟವರನ್ನು, ಮಕ್ಕಳನ್ನು, ಗರ್ಭಿಣಿಯರನ್ನು ವಾಪಸ್ ಕಳಿಸಲಾಗುತ್ತಿದೆ.
ಪ್ರಥಮ ದಿನವಾದ ಮಂಗಳವಾರ ಸ್ಥಳೀಯ ಊರುಗಳಿಗೆ ತೆರಳುವ ಅವಕಾಶ ಇರಲಿಲ್ಲ. ದೂರದ ಮೈಸೂರು, ಬೆಂಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ಇತರೆ ಜಿಲ್ಲೆಗಳಿಗೆ ಬಸ್ಗಳನ್ನು ಬಿಡಲಾಯಿತು. 30 ಪ್ರಯಾಣಿಕರು ಆಗುತ್ತಿದ್ದಂತೆ ಒಂದೊಂದು ಬಸ್ ಕಳಿಸಲಾಗುತ್ತಿದೆ.
ದೂರದ ಊರುಗಳಿಗೆ ತೆರಳುವವರು ತುಮಕೂರು ಮುಖ್ಯ ಬಸ್ನಿಲ್ದಾಣಕ್ಕೆ ಬಂದೇ ಪ್ರಯಾಣಿಸಬೇಕಿದೆ. ರಸ್ತೆ ಮಧ್ಯೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದಿಲ್ಲ. ಕೇವಲ ಇಳಿಯುವವರಿಗೆ ಮಾತ್ರವೇ ಅವಕಾಶ ನೀಡಲಾಗುವುದು, ಪ್ರಥಮ ದಿನವಾದ ಮಂಗಳವಾರ 150 ಬಸ್ಗಳನ್ನು ಸಿದ್ಧವಾಗಿಟ್ಟುಕೊಂಡಿದ್ದು ಪ್ರಯಾಣಿಕರನ್ನು ಆಧರಿಸಿ ಬಸ್ಗಳನ್ನು ಓಡಿಸಲಾಗುವುದು ಎಂದು ಕೆಎಸ್ಆರ್ಟಿಸಿ ತುಮಕೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ ಮಾಹಿತಿ ನೀಡಿದರು.
ಮನೆ ಸೇರೋದು ಎಷ್ಟೊತ್ತಿಗೋ?
ನಾನು ಚಾಮರಾಜನಗರಕ್ಕೆ ತೆರಳಲೆಂದು ಬೆಳಿಗ್ಗೆ 6ಕ್ಕೆ ಬಸ್ನಿಲ್ದಾಣಕ್ಕೆ ಬಂದಿದ್ದೇನೆ. ಇವರು 30 ಪ್ರಯಾಣಿಕರು ಆಗುವವರೆಗೆ ಬಸ್ ಬಿಡುವುದಿಲ್ಲ ಎನ್ನುತ್ತಿದ್ದಾರೆ. ಗಂಟೆ 8 ದಾಟುತ್ತಿದೆ. ಇನ್ನೂ ಮನೆಗೆ ಸೇರುವುದು ಎಷ್ಟೊತ್ತು ಆಗುತ್ತದೊ ಎಂದು ಪ್ರಯಾಣಿಕರಾದ ಚಿಕ್ಕರುದ್ರಯ್ಯ ತಮ್ಮ ಅಸಮಾಧಾನ ಹೊರಹಾಕಿದರು.
ಕಾದು ಸಾಕಾಯ್ತು
ನಾನು ಮೈಸೂರಿಗೆ ಡ್ಯೂಟಿಗೆ ತೆರಳಬೇಕಾಗಿದ್ದು ಬೆಳಿಗ್ಗೆ 6.30ಕ್ಕೆ ಬಸ್ನಿಲ್ದಾಣಕ್ಕೆ ಬಂದಿದ್ದೇನೆ. ಸಮಯ 8 ಆದರೂ ಇನ್ನು ಮೈಸೂರು ಕಡೆಗೆ ತೆರಳುವವರ ಸಂಖ್ಯೆ 30 ದಾಟಿಲ್ಲ. ಕಾದು ಕಾದು ಸಾಕಾಗಿದೆ. ನಿಗದಿತ ಸಮಯಕ್ಕೆ ಡ್ಯೂಟಿಗೆ ತರಳುವುದು ಅಸಾಧ್ಯ. ಆದರೂ ವ್ಯವಸ್ಥೆಗೆ ಹೊಂದಿಕೊಂಡು ಪ್ರಯಾಣಿಸಲೇಬೇಕಿದೆ ಎಂದು ಪ್ರಯಾಣಿಕರಾದ ಹೇಮಾವತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.