ತುಮಕೂರು: ಹಲಸಿನ ಹಣ್ಣಿನಲ್ಲೇ ಉತ್ಕೃಷ್ಟ ಎಂದು ಗುರುತಿಸಿರುವ ಜಿಲ್ಲೆಯ ಹೆಮ್ಮೆಯ ತಳಿಗಳಾದ ‘ಸಿದ್ದು’ ಹಾಗೂ ‘ಶಂಕರ’ ಹಣ್ಣಿಗೆ ಹಕ್ಕು ಸ್ವಾಮ್ಯ (ಪೇಟೆಂಟ್) ಸಿಕ್ಕಿದೆ. ಇದರಿಂದಾಗಿ ಇನ್ನು ಮುಂದೆ ಯಾರೊಬ್ಬರೂ ಈ ಹಣ್ಣಿನ ತಳಿಗಳನ್ನು ಬೆಳೆಸಲು, ಮಾರಾಟ ಮಾಡಲು ಅವಕಾಶ ಇರುವುದಿಲ್ಲ.
ಕೇಂದ್ರ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ‘ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರ’ (ಪಿಪಿವಿಎಫ್ಆರ್ಎ) ಈ ಪೇಟೆಂಟ್ ನೀಡಿದೆ.
ರಾಜ್ಯದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಹಲಸಿಗೆ ಸಿಕ್ಕಿರುವ ಮೊದಲ ಪೇಟೆಂಟ್ ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಹಿರೇಹಳ್ಳಿ ಘಟಕದ ನಿರ್ದೇಶಕ ಡಾ.ಜಿ.ಕರುಣಾಕರ್ ತಿಳಿಸಿದರು.
‘ಸಿದ್ದು’ ಹಾಗೂ ‘ಶಂಕರ’ ಹಲಸಿನ ಹಣ್ಣಿನ ಮಾಲೀಕರು ಮಾತ್ರ ಇದರ ಹಕ್ಕು ಸ್ವಾಮ್ಯ ಹೊಂದಿರುತ್ತಾರೆ. ಮುಂದಿನ 20 ವರ್ಷ ಈ ಹಣ್ಣಿನ ತಳಿಯನ್ನು ಬೇರೆ ಯಾರೂ ಬೆಳೆಸಲು ಅವಕಾಶ ಸಿಗುವುದಿಲ್ಲ. ಹಣ್ಣಿನ ಮಾಲೀಕರು ಅಥವಾ ಅವರು ಅನುಮತಿ ನೀಡಿದವರು ಮಾತ್ರ ಸಸಿಗಳನ್ನು ಬೆಳೆಸಿ, ಮಾರಾಟ ಮಾಡಲು ಅವಕಾಶವಿದೆ.
ನಗರದ ಹೊರವಲಯದಲ್ಲಿರುವ ಐಐಎಚ್ಆರ್ ಸಂಸ್ಥೆಯು 2017ರಲ್ಲಿ ಗುಬ್ಬಿ ತಾಲ್ಲೂಕಿನ ಚೇಳೂರಿನ ‘ಸಿದ್ದು’ ಹಲಸು ಮತ್ತು 2019ರಲ್ಲಿ ಚೌಡ್ಲಾಪುರದ ‘ಶಂಕರ’ ಹಲಸಿನ ತಳಿಯನ್ನು ದೇಶದ ಅತ್ಯುತ್ತಮ ಹಲಸಿನ ತಳಿಗಳು ಎಂದು ಗುರುತಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.