ತುಮಕೂರು: ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಮೂರು ದಿನಗಳಿಂದ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ತಂಡವು ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಸಮಗ್ರ ವಿತರಿಸಿದ ಕೇಂದ್ರ ವಲಯ ಐಜಿಪಿ ಬಿ.ದಯಾನಂದ್ ಮಾತನಾಡಿ, ‘ಕ್ರೀಡಾಕೂಟದಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅತ್ಯಂತ ಸ್ಪೂರ್ತಿಯಿಂದ ಭಾಗವಹಿಸಿರುವುದು ಉತ್ತಮವಾದುದು. ಇದೇ ಸ್ಪೂರ್ತಿ ನಿರಂತರವಾಗಿರಲಿ. ಆರೋಗ್ಯ ರಕ್ಷಣೆಗೆ ಗಮನಹರಿಸಿ’ ಎಂದು ನುಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ, ತುಮಕೂರು ನಗರ ಡಿಎಸ್ಪಿ ಕೆ.ಎಸ್.ನಾಗರಾಜ್ ಹಾಗೂ ಇತರ ಅಧಿಕಾರಿಗಳಿದ್ದರು.
ಕುಣಿದು ಕುಪ್ಪಳಿಸಿದರು: ಕೊನೆ ದಿನ ನಡೆದ ಸ್ಪರ್ಧೆಗಳನ್ನು ವೀಕ್ಷಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕುಟುಂಬ ವರ್ಗದವರು ಕ್ರೀಡಾ ಲೋಕದಲ್ಲಿ ವಿಹರಿಸಿದರು. ತಮ್ಮ ತಮ್ಮ ತಂಡಗಳನ್ನು, ಆಟಗಾರರನ್ನು ಹುರುದುಂಬಿಸಿದರು. ವಿಶೇಷವಾಗಿ ಹಗ್ಗ ಜಗ್ಗಾಟ, ಓಟದಲ್ಲಿ ಗೆಲುವಿಗೆ ನಡೆದ ಸೆಣಸಾಟ ರಣರಂಗ ನೆನಪಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.