ಕುಣಿಗಲ್: ತಾಲ್ಲೂಕಿನ ರಂಗಸ್ವಾಮಿ ಗುಡ್ಡದ ತೋಟಗಾರಿಕೆ ಇಲಾಖೆಯಲ್ಲಿ ರೈತರ ವಿತರಣೆಗಾಗಿ ಕಳಪೆ ತೆಂಗಿನ ಕಾಯಿಗಳನ್ನು ಬಿತ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ರಾಯಗೋನಹಳ್ಳಿ ತೆಂಗು ಉತ್ಪಾದಕರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ರಂಗಸ್ವಾಮಿ ಗುಡ್ಡದ ತೋಟಗಾರಿಕೆ ಇಲಾಖೆ ಕಚೇರಿ ಬಳಿ ಪ್ರತಿಭಟನೆಯಲ್ಲಿ ರಾಯಗೊಂಡನಹಳ್ಳಿ ತೆಂಗು ಉತ್ಪಾದಕರ ಸಂಘದ ಅಧ್ಯಕ್ಷ ಹಟ್ಟಿ ರಂಗ ಮಾತನಾಡಿ, ‘ಇಲಾಖೆಯಿಂದ ಪ್ರತಿ ವರ್ಷ 50 ಸಾವಿರ ಉತ್ತಮ ಗುಣಮಟ್ಟದ ತೆಂಗಿನ ಸಸಿಗಳನ್ನು ರೈತರಿಗೆ ವಿತರಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 70 ಸಾವಿರ ತೆಂಗಿನ ಸಸಿಗಳನ್ನು ಬೆಳೆಸುವ ಉದ್ದೇಶ ಇಲಾಖೆ ಹೊಂದಿದೆ. ಆದರೆ, ಈ ಬಾರಿ ಶೇ 20ರಷ್ಟು ಕಳಪೆ ತೆಂಗು ಉತ್ಪಾದನೆಗಾಗಿ ಬಳಸುತ್ತಿರುವುದು ಕಂಡುಬಂದಿದೆ’ ಎಂದು ಆರೋಪಿಸಿದರು.
ಕಳಪೆ ಗುಣಮಟ್ಟದ ತೆಂಗು ಬಳಸಿ ಸಸಿಗಳನ್ನು ಬೆಳೆಸಿ ಅಧಿಕಾರಿಗಳು ವಿತರಣೆ ಮಾಡುತ್ತಾರೆ. ಆದರೆ ಸಸಿಗಳು ಉತ್ತಮವಾಗಿ ಬೆಳೆದರು ಕಾಲಾನಂತರ ಉತ್ತಮ ಇಳುವರಿ ಪಡೆಯದೆ ರೈತರು ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂದು ದೂರಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಭೇಟಿ ನೀಡಿ, ತೆಂಗು ಉತ್ಪಾದಕರ ಅಹವಾಲನ್ನು ಆಲಿಸಿ ಕಳಪೆ ಗುಣಮಟ್ಟದ ತೆಂಗನ್ನು ಬಳಸುವುದಿಲ್ಲ. ಉತ್ತಮ ಗುಣಮಟ್ಟದ ತೆಂಗನ್ನೇ ಬಳಸುವುದಾಗಿ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು.
ಉಪಾಧ್ಯಕ್ಷ ಕೀರ್ತಿ ಕುಮಾರ್, ಮುಖಂಡರಾದ ಭರತ್, ವಾಣಿಗೆರೆ ರಂಗರಾಜು, ನಾರಾಯಣ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.