ADVERTISEMENT

ಸ್ಮಶಾನ ಜಾಗ ಉಳಿಸಿಕೊಡಿ: ಪರಿಶಿಷ್ಟರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 2:54 IST
Last Updated 21 ಅಕ್ಟೋಬರ್ 2020, 2:54 IST
ವೈ.ಎನ್.ಹೊಸಕೋಟೆ ಹೋಬಳಿಯ ಕತಿಕ್ಯಾನಹಳ್ಳಿ ಗ್ರಾಮದಲ್ಲನ ಸ್ಮಶಾನ
ವೈ.ಎನ್.ಹೊಸಕೋಟೆ ಹೋಬಳಿಯ ಕತಿಕ್ಯಾನಹಳ್ಳಿ ಗ್ರಾಮದಲ್ಲನ ಸ್ಮಶಾನ   

ವೈಎನ್ ಹೊಸಕೋಟೆ: ತಲೆಮಾರುಗಳಿಂದ ಅಂತ್ಯಸಂಸ್ಕಾರ ನೆರವೇರಿಸಿಕೊಂಡು ಬರುತ್ತಿರುವ ಸ್ಮಶಾನ ಸ್ಥಳವನ್ನು ಸರ್ಕಾರ ಉಳಿಸಿಕೊಡಬೇಕು ಎಂದು ಹೋಬಳಿಯ ಕತಿಕ್ಯಾತನಹಳ್ಳಿ ಗ್ರಾಮದ ಪರಿಶಿಷ್ಟ ಸಮುದಾಯದವರು ಸರ್ಕಾರವನ್ನು ಒತ್ತಾಯಿಸಿದರು.

ಸೋಮವಾರ ಅಂತ್ಯಸಂಸ್ಕಾರ ನಡೆಸಲು ಮುಂದಾದಾಗ ಸ್ಮಶಾನ ಜಾಗದ ಒಡೆತನ ಹೊಂದಿರುವವರು ಅಲ್ಲಿ ಅವಕಾಶ ನೀಡದ ಕಾರಣ ಗ್ರಾಮದಲ್ಲಿ ಸ್ಮಶಾನ ಸಮಸ್ಯೆ ಮುಂಚೂಣಿಗೆ ಬಂದಿದೆ.

ಈ ಹಿಂದೆ ಹಲವು ಬಾರಿ ಇಂತಹ ಸಮಸ್ಯೆ ತಲೆದೋರಿದೆ. ಪರಿಶಿಷ್ಟರಿಗೆ ಪ್ರತ್ಯೇಕ ಸ್ಮಶಾನ ಇಲ್ಲದ ಕಾರಣ ಖಾಸಗಿ ಜಮೀನಿನಲ್ಲಿ ಹಲವು ದಶಕಗಳಿಂದ ಅಂತ್ಯಸಂಸ್ಕಾರ ನಡೆಸುತ್ತಾ ಬಂದಿದ್ದೇವೆ. ಇಲ್ಲಿ ನಮ್ಮವರ ಅನೇಕ ಸಮಾದಿಗಳಿದ್ದು, ಹಬ್ಬ ಇನ್ನಿತರೆ ದಿನಗಳಲ್ಲಿ ಪೂಜೆ ನಡೆಸುತ್ತೇವೆ. ಆದರೆ ಇತ್ತೀಚೆಗೆ ಜಮೀನು ಮಾಲೀಕರು ನಮಗೆ ಅವಕಾಶ ನೀಡುತ್ತಿಲ್ಲ. ಜಮೀನಿಗೆ ಮುಳ್ಳುತಂತಿ ಹಾಕಿ ಪ್ರವೇಶ ನಿಷೇಧಿಸಿದ್ದಾರೆ ಎಂದು ಸಮದಾಯದ ಮುಖಂಡರು ಹೇಳಿದರು.

ADVERTISEMENT

‘ಯಾವುದೇ ಅಧಿಕಾರಿ ಬಂದರೂ ನಮ್ಮ ಪರ ನಿಲ್ಲುತ್ತಿಲ್ಲ. ಅವರಿಗೆ ತೋಚಿದ್ದನ್ನು ಹೇಳಿ ಹೋಗುತ್ತಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಅಧಿಕಾರಿಗಳು ಈ ಹಿಂದೆಯೇ ಈ ಸಮಸ್ಯೆಗೆ ಪರಿಹಾವಾಗಿ ಸರ್ಕಾರಿ ಜಮೀನನ್ನು ಪರಿಶಿಷ್ಟರ ಪ್ರತ್ಯೇಕ ಸ್ಮಶಾನಕ್ಕೆ ಗುರುತಿಸಿದೆ. ಅದಕ್ಕೆ ಸೂಕ್ತ ದಾರಿ ಕಲ್ಪಿಸಲು ಸಂಬಂಧಿಸಿದ ಜಮೀನು ಮಾಲೀಕರೊಂದಿಗೆ ಮಾತನಾಡಲಾಗಿದೆ. ಅವರು ತಮ್ಮ ಜಮೀನಿನಲ್ಲಿ ದಾರಿ ನೀಡಲು ಒಪ್ಪಿದ್ದಾರೆ. ಸ್ಮಶಾನದ ದಾರಿಯನ್ನು ಈಗಾಗಲೇ ಗುರ್ತಿಸಲಾಗಿದೆ. ಹಾಗಾಗಿ ನಿಗದಿತ ಜಾಗದಲ್ಲಿ ಅಂತ್ಯಕ್ರಿಯೆ ಮಾಡಲು ಸೂಚಿಸಿದರು. ಆದರೆ ಅದಕ್ಕೆ ಒಪ್ಪದ ಸ್ಥಳೀಯರು ಮೂಲ ಸ್ಮಶಾನ ಸ್ಥಳವನ್ನೇ ಬಿಡಿಸಿಕೊಡುವಂತೆ ಒತ್ತಾಯಿಸಿದರು. ಅದಿಕಾರಿಗಳು ಮನವೊಲಿಸಿದ ನಂತರ ಮೃತರ ಸಂಬಂಧಿಕರ ಜಮೀನಿನಲ್ಲೇ ಅಂತ್ಯಸಂಸ್ಕಾರ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.