ತುಮಕೂರು: ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ತುಮಕೂರು ವಿಶ್ವವಿದ್ಯಾನಿಲಯ ಮೊತ್ತಮೊದಲಿಗೆ ಪದವಿ ಕನ್ನಡ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿರುವುದು ಹೆಮ್ಮೆಯ ವಿಚಾರ ಎಂದು ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ಸಿದ್ಧಗೊಂಡ ವಿ.ವಿ ಪದವಿ ತರಗತಿಗಳ ಒಂಬತ್ತು ಪಠ್ಯಪುಸ್ತಕಗಳನ್ನು ಶುಕ್ರವಾರ ಬಿಡುಗಡೆ ಮಾಡಿ ಮಾತನಾಡಿದರು.
ಯಾವುದೇ ದೇಶ ಜಾಗತಿಕವಾಗಿ ಮುಂಚೂಣಿಗೆ ಬರಬೇಕಿದ್ದರೆ ಅದಕ್ಕೆ ಸ್ಪಷ್ಟ ಅರ್ಥನೀತಿ, ರಾಜನೀತಿ, ವಿದೇಶಾಂಗ ನೀತಿಗಳು ಅವಶ್ಯಕ. ಜತೆಗೆ ನಿಖರವಾದ ಶಿಕ್ಷಣ ನೀತಿಯೂ ಬೇಕು ಎಂದು ಅಭಿಪ್ರಾಯಪಟ್ಟರು.
ಕಳೆದ ಎಪ್ಪತ್ತು ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಶಿಕ್ಷಣ ವ್ಯವಸ್ಥೆಯನ್ನು ಬದಲಿಸುವ ಸಲುವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪುಗೊಂಡಿದೆ. ಬದಲಾದ ಜಾಗತಿಕ ವಿದ್ಯಮಾನ, ಹೊಸ ರೂಪ– ಸ್ವರೂಪ, ಆಯಾಮಕ್ಕೆ ಅನುಗುಣವಾಗಿ ಈ ಪಠ್ಯಪುಸ್ತಕಗಳು ತಯಾರಾಗಿವೆ. ಬ್ರಿಟಿಷ್ ಪ್ರಣೀತ ಅಂಕಾಧಾರಿತ ಶಿಕ್ಷಣ ಪದ್ಧತಿಗಿಂತ ಜ್ಞಾನಾಧಾರಿತ ಶಿಕ್ಷಣಕ್ಕೆ ಒತ್ತು ಸಿಕ್ಕಿದೆ. ಶಿಕ್ಷಣ ನೀತಿಯು ಕಲಿಕೆಗೂ, ಬದುಕಿಗೂ, ಯೋಚನೆಯ ಕ್ರಮಕ್ಕೂ ನೇರ ಸಂಬಂಧವನ್ನು ಕಲ್ಪಿಸುತ್ತದೆ. ಅದಕ್ಕೆ ಪೂರಕವಾದ ಪಠ್ಯಗಳನ್ನು ರೂಪಿಸುವುದು ಮೆಚ್ಚುವ ವಿಚಾರ ಎಂದು ತಿಳಿಸಿದರು.
ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ, ಪ್ರಸಾರಾಂಗದ ನಿರ್ದೇಶಕ ಹಾಗೂ ಪದವಿ ಕನ್ನಡ ಅಧ್ಯಯನ ಮಂಡಳಿ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ ಶೆಟ್ಟಿ, ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟದ ಅಧ್ಯಕ್ಷ ಡಾ.ಡಿ.ಶಿವನಂಜಯ್ಯ ಉಪಸ್ಥಿತರಿದ್ದರು. ಡಾ.ರೇಣುಕಪ್ರಸಾದ್ ಕಾರ್ಯಕ್ರಮ ನಿರ್ವಹಿಸಿ, ಡಾ.ನೇತ್ರಾವತಿ ವಂದಿಸಿದರು.
ಪುಸ್ತಕ ಬಿಡುಗಡೆ ಸಮಾರಂಭದ ಬಳಿಕ ಕನ್ನಡ ಅಧ್ಯಾಪಕರಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ಭಾಷಾ ನೀತಿಯ ಕುರಿತು ಕಾರ್ಯಾಗಾರ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.