ತುಮಕೂರು: ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಇಬ್ಬರು ಯುವಕರ ಕೊಲೆಯನ್ನು ಖಂಡಿಸಿ ಬಹುಜನ ಸಮಾಜ ಪಕ್ಷ, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮೇ 11ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮೂರು ವರ್ಷಗಳ ಹಿಂದೆ ಗುಬ್ಬಿ ಪಟ್ಟಣದಲ್ಲಿ ಅಭಿಷೇಕ್ ಎಂಬ ಹುಡುಗನನ್ನು ನಗ್ನಗೊಳಿಸಿ ಕೂಡಿ ಹಾಕಿ ಹಿಂಸೆ ಕೊಡಲಾಗಿತ್ತು. ಶಿವರಾತ್ರಿಯ ದಿನ ಕಲ್ಲೂರಿನಬೈರಪ್ಪ ಎಂಬ ಹುಡುಗನ ಕೊಲೆಯಾಯಿತು. ಹೂವಿನಕಟ್ಟೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನು ಜೀವಸಹಿತ ಸುಟ್ಟು ಹಾಕಿರುವುದು ಸೇರಿದಂತೆ ಪರಿಶಿಷ್ಟರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಸರ್ಕಾರದ ಪರಿಶಿಷ್ಟ ಸಮುದಾಯಗಳ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನಗರದಲ್ಲಿ ನಡೆದ ಸಭೆಯಲ್ಲಿ ಬಹುಜನ ಸಮಾಜ ಪಕ್ಷದಜಿಲ್ಲಾಘಟಕದ ಅಧ್ಯಕ್ಷಜೆ.ಎನ್. ರಾಜಸಿಂಹ ತಿಳಿಸಿದರು.
ವಿವಿಧ ಸಂಘಟನೆಯ ಮುಖಂಡರಾದ ಗುರುಮೂರ್ತಿ, ಪಿ.ಎನ್. ರಾಮಯ್ಯ, ತಾಜುದ್ದೀನ್ ಷರೀಫ್, ಮಾರುತಿ ಪ್ರಸಾದ್, ವೆಂಕಟೇಶ್, ಕೊಟ್ಟ ಶಂಕರ್, ರಘುಕೇಬಲ್, ನರಸಯ್ಯ, ಶಿವಣ್ಣ, ರಂಗಧಾಮಯ್ಯ, ಎಂ.ಎಸ್. ಜಗದಿಶ್, ಗೋಪಾಲ್, ಮರಳೂರು ಕೃಷ್ಣಮೂರ್ತಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.