ADVERTISEMENT

ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭ: ವೇತನ ಪಾವತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 10:46 IST
Last Updated 12 ಆಗಸ್ಟ್ 2020, 10:46 IST
ಚಿಕ್ಕಬಳ್ಳಾಪುರದ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಬಿಸಿಯೂಟ ನೌಕರರು ಮಂಗಳವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದರು
ಚಿಕ್ಕಬಳ್ಳಾಪುರದ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಬಿಸಿಯೂಟ ನೌಕರರು ಮಂಗಳವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದರು   

ಚಿಕ್ಕಬಳ್ಳಾಪುರ: ಬಾಕಿ ವೇತನ ಪಾವತಿ, ಉದ್ಯೋಗ ಭದ್ರತೆ ಒದಗಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಬಿಸಿಯೂಟ ನೌಕರರು ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಮಂಗಳವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಈ ವೇಳೆ ಸಂಘದ ಅಧ್ಯಕ್ಷೆ ಉಮಾ ಮಾತನಾಡಿ, ‘ರಾಜ್ಯದಲ್ಲಿ 1.18 ಲಕ್ಷ ಮಹಿಳೆಯರು ಬಿಸಿಯೂಟ ಯೋಜನೆಯಡಿ ದುಡಿಯುತ್ತಿದ್ದು, ಕೋವಿಡ್ ಕಾರಣದಿಂದಾಗಿ ಶಾಲೆಗಳನ್ನು ಮುಚ್ಚಲಾಗಿದೆ. ಇದರಿಂದ ಬಿಸಿಯೂಟ ಬದಲಿಗೆ ಆಹಾರ ಧಾನ್ಯಗಳನ್ನು ಮಕ್ಕಳ ಮನೆ ಬಾಗಿಲಿಗೆ ಕಾರ್ಯಕರ್ತೆಯರೇ ತಲುಪಿಸುತ್ತಿದ್ದಾರೆ. ಆದರೆ, ಇದೇ ಕೆಲಸವನ್ನು ನಂಬಿ ಜೀವನ ನಡೆಸುತ್ತಿರುವ ಲಕ್ಷಾಂತರ ಮಹಿಳೆಯರಿಗೆ ಸರ್ಕಾರ ಕಳೆದ ಹಲವು ತಿಂಗಳಿಂದ ವೇತನ ಪಾವತಿಸದೆ ಬೀದಿಪಾಲು ಮಾಡಿದೆ’ ಎಂದು ಆರೋಪಿಸಿದರು.

ಕಳೆದ ಏಪ್ರಿಲ್‍ನಿಂದ ವೇತನವಾಗಲಿ, ಇತರ ವಲಯಗಳಿಗೆ ಘೋಷಣೆ ಮಾಡಿರುವಂತೆ ವಿಶೇಷ ಪ್ಯಾಕೇಜ್‍ಗಳಾಗಿ ಸಿಕ್ಕಿಲ್ಲ. ಇದರಿಂದ ಸಿಬ್ಬಂದಿ ದಯನೀಯ ಸ್ಥಿತಿಗೆ ತಲುಪಿದ್ದಾರೆ. ಹಾಗಾಗಿ ಶೀಘ್ರವೇ ಬಾಕಿ ವೇತನ ಬಿಡುಗಡೆ ಮಾಡಿ ನೌಕರರನ್ನು ಖಾಯಂಗೊಳಿಸಬೇಕು. ಎಲ್ಲ ಸರ್ಕಾರಿ ಸವಲತ್ತು ಒದಗಿಸಬೇಕು. ಎಲ್‍ಐಸಿ ಆಧಾರಿತ ಪಿಂಚಣಿ ನೀಡಬೇಕು. ನೌಕರರು ಹಾಗೂಅವರ ಕುಟುಂಬಗಳಗೆ ವೈದ್ಯಕೀಯವೆಚ್ಚ ಭರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಸಂಘದ ಗೌರವಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಆರ್.ಮಂಜುಳ, ಖಜಾಂಚಿ ಚೆನ್ನಮ್ಮ, ಪ್ರಮೀಳಾ, ರತ್ನಮ್ಮ, ಮಂಜುಳಾ, ಭಾಗ್ಯಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.