ತುಮಕೂರು: ಗೌರಿ, ಗಣೇಶ ಹಬ್ಬಕ್ಕೆ ಖರೀದಿ ಭರಾಟೆ ಬಿರುಸು ಪಡೆದುಕೊಂಡಿದ್ದು, ಬುಧವಾರ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡುಬಂತು. ಬೆಳಿಗ್ಗೆಯಿಂದಲೇ ಜನರು ಹಬ್ಬಕ್ಕೆ ಬೇಕಾದ ಹೂವು, ಮಾವಿನ ಸೊಪ್ಪು, ಬಾಳೆ ಕಂದು ಖರೀದಿಸಿದರು. ಆದರೆ ಹಿಂದಿನ ವರ್ಷದಷ್ಟು ಮಾರುಕಟ್ಟೆ ಕಳೆಗಟ್ಟಿರಲಿಲ್ಲ.
ಹಬ್ಬ ಸಮೀಪಿಸಿದಂತೆ ಹೂವು, ಹಣ್ಣುಗಳ ಬೆಲೆ ದುಬಾರಿಯಾಗಿದೆ. ಸೇವಂತಿಗೆ ಹೂವು ಮಾರು
₹80–100ರ ವರೆಗೆ ಏರಿಕೆ ಕಂಡಿ
ದ್ದರೆ, ಗುರುವಾರದ ವೇಳೆಗೆ ಮತ್ತಷ್ಟು
ಏರಿಕೆಯಾಗಲಿದೆ. ಮಲ್ಲೆ, ಕನಕಾಂಬರ, ಗುಲಾಬಿ ಹೂವುಗಳ ಬೆಲೆಯೂ ಹೆಚ್ಚಳ
ವಾಗಿತ್ತು. ಹೂವಿನ ಹಾರಗಳ ಬೆಲೆ
ಗಗನ ಮುಟ್ಟಿತ್ತು. ಒಂದು ಚಿಕ್ಕ
ಹಾರದ ಬೆಲೆಯೂ ₹80 ದಾಟಿತ್ತು.
ಕಳೆದ ಕೆಲ ದಿನಗಳಿಂದ ಇಳಿಕೆಯಾಗಿದ್ದ ಹಣ್ಣುಗಳ ಬೆಲೆ ಹಬ್ಬ ಸಮೀಪಿಸಿದಂತೆ ಹೆಚ್ಚಳವಾಗಿದ್ದು, ಸೇಬು, ಮರಸೇಬು, ಸೀಬೆ, ಏಲಕ್ಕಿ ಬಾಳೆ ಹಣ್ಣಿನ ಬೆಲೆ ದುಬಾರಿಯಾಗಿತ್ತು.
ಕೋವಿಡ್ನಿಂದಾಗಿ ಗೌರಿ, ಗಣೇಶ ಹಬ್ಬದ ಆಚರಣೆಗೆ ಕೆಲವು ನಿರ್ಬಂಧಗಳನ್ನು ವಿಧಿಸಿದ್ದು, ಐದು ದಿನಗಳ ಗಣೇಶೋತ್ಸವಕ್ಕೆ ಅವಕಾಶ ನೀಡಲಾಗಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆಗೂ ಕೆಲವು ನಿರ್ಬಂಧ ಹಾಕಲಾಗಿದೆ. ಹಾಗಾಗಿ ಹಿಂದಿನ ವರ್ಷಗಳಂತೆ ಗಣೇಶ ಮೂರ್ತಿಗಳ ಖರೀದಿಯ ವಾತಾವರಣ ಕಂಡು ಬರಲಿಲ್ಲ. ಗುರುವಾರ ಖರೀದಿಗೆ ಜನರು ಬರುವ ನಿರೀಕ್ಷೆಯಲ್ಲಿ ಮೂರ್ತಿ ಮಾರಾಟಗಾರರು ಇದ್ದಾರೆ.
ಕೋವಿಡ್ನಿಂದಾಗಿ ಹಲವರು ಸಂಕಷ್ಟಕ್ಕೆ ಸಿಲುಕಿದ್ದು, ಹಬ್ಬ
ಆಚರಣೆಗೆ ಜನರಲ್ಲಿ ಉತ್ಸಾಹ ಕಾಣುತ್ತಿಲ್ಲ. ಎಲ್ಲಾ ವಸ್ತುಗಳು ದುಬಾರಿಯಾಗಿದ್ದು, ಸಾಕಷ್ಟು ಮಂದಿ ಖರೀದಿಯಿಂದ ದೂರವೇ ಉಳಿದಿದ್ದಾರೆ. ಹಲವರು ಆಚರಣೆಗಷ್ಟೇ ಹಬ್ಬವನ್ನು ಸೀಮಿತಗೊಳಿಸಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಖರೀದಿಸುವವರು ಕಡಿಮೆ ಎನ್ನುತ್ತಾರೆ ವ್ಯಾಪಾರಿ ರಘುರಾಮ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.