ತುಮಕೂರು: ಮುಂದಿನ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷದ 90 ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸದ್ಯದಲ್ಲಿಯೇ ಬಿಡುಗಡೆ ಮಾಡಲಿದ್ದಾರೆ ಎಂದು ಎಎಪಿ ರಾಜ್ಯ ಘಟಕದ ಉಪಾಧ್ಯಕ್ಷ ಡಾ.ಬಿ.ಎಲ್. ವಿಶ್ವನಾಥ್ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಎಎಪಿ ಜಿಲ್ಲಾ ಪದಾಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ‘ಪಕ್ಷದ ವರಿಷ್ಠರು ನೀಡಿದ ಕಾರ್ಯಸೂಚಿ ಪ್ರಕಾರ ಕೆಲಸ ಮಾಡಿದ ಟಿಕೆಟ್ ಆಕಾಂಕ್ಷಿಗಳನ್ನು ಎ, ಬಿ ಮತ್ತು ಸಿ ಗ್ರೇಡ್ ಅನ್ವಯ ವಿಂಗಡಿಸಲಾಗಿದೆ. ಇದರಲ್ಲಿ ಎ ಗ್ರೇಡ್ನಲ್ಲಿರುವ 90 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುವುದು’ ಎಂದರು.
ಎಎಪಿ ಜಿಲ್ಲಾ ಘಟಕದ ಅಧ್ಯಕ್ಷ ಅಂಕಸಂದ್ರ ಪ್ರೇಮಕುಮಾರ್, ‘ಜಿಲ್ಲೆಯ 11 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಈ ಬಾರಿ ಚತುಷ್ಕೋನ ಸ್ಪರ್ಧೆಗೆ ಎಎಪಿ ನಾಂದಿ ಹಾಡಲಿದೆ. ಜನ ಸಾಮಾನ್ಯರನ್ನೇ ನಾಯಕರನ್ನಾಗಿ ರೂಪಿಸುತ್ತಿದ್ದು, ಪಕ್ಷದ ಸೇರ್ಪಡೆಗೆ ಹೆಚ್ಚಿನ ಯುವಕರು, ಹೊಸ ಮತದಾರರು ಮುಂದಾಗುತ್ತಿದ್ದಾರೆ’ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಜೆಡಿಎಸ್ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಾವಗಡ ರಾಮಾಂಜಿನಪ್ಪ ಪಕ್ಷಕ್ಕೆ ಸೇರ್ಪಡೆಯಾದರು. ಎಎಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ನಿಜಾಮುದ್ದೀನ್, ಪದಾಧಿಕಾರಿಗಳಾದ ಚಿಕ್ಕಸ್ವಾಮಿ ಗೌಡ, ಸೈಯದ್ ರುಕ್ಷಾನಾ ಬಾನು, ಜಯರಾಮಯ್ಯ, ಪ್ರಭುಸ್ವಾಮಿ, ಶಶಿಕುಮಾರ್, ಮೊಹ್ಮದ್ ಗೌಸ್ಪೀರ್, ಲಿಂಗರಾಜು, ನರಸಿಂಹಪ್ಪ, ನಾಗಭೂಷಣ್, ಸೈಯದ್ ಮುಜಾಮಿಲ್ ಪಾಷಾ, ರಾಮು, ಕಳುವರಹಳ್ಳಿ ಸತೀಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.