ADVERTISEMENT

ರೈಲ್ವೆ ನಿಲ್ದಾಣ ರಸ್ತೆ: ಕಸವಿಲೇವಾರಿ ಘಟಕ ಸ್ಥಳಾಂತರಕ್ಕೆ ಒತ್ತಾಯ

ಹದಗೆಟ್ಟ ರಸ್ತೆ, ಒಳಚರಂಡಿ ಪರಿಶೀಲನೆ ನಡೆಸಿದ ವಾರ್ಡ್ ಸದಸ್ಯೆ ಗಿರಿಜಾ ಧನಿಯಾಕುಮಾರ್

​ಪ್ರಜಾವಾಣಿ ವಾರ್ತೆ
Published 19 ಮೇ 2019, 11:07 IST
Last Updated 19 ಮೇ 2019, 11:07 IST
ವಾರ್ಡಿನಲ್ಲಿರುವ ಕಸವಿಲೇವಾರಿ ಘಟಕದಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ನಿವಾಸಿಗಳು ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್ ಅವರ ಗಮನಕ್ಕೆ ತಂದರು
ವಾರ್ಡಿನಲ್ಲಿರುವ ಕಸವಿಲೇವಾರಿ ಘಟಕದಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ನಿವಾಸಿಗಳು ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್ ಅವರ ಗಮನಕ್ಕೆ ತಂದರು   

ತುಮಕೂರು: ‘ನಗರದ 15ನೇ ವಾರ್ಡಿನ ಹಲವು ಸಮಸ್ಯೆಗಳಿವೆ. ರೈಲ್ವೆ ನಿಲ್ದಾಣ ರಸ್ತೆಯಲ್ಲಿನ ಯುಜಿಡಿ ಸಮಸ್ಯೆ ಹಾಗೂ ರಸ್ತೆಗೆ ಡಾಂಬರು ಹಾಕುವುದು, ಉಪ್ಪಾರಹಳ್ಳಿ ಕೆಳ ಸೇತುವೆ ಬಳಿಯ ಕಸ ವಿಲೇವಾರಿ ಘಟಕದ ಸ್ಥಳಾಂತರ ಮಾಡಬೇಕು. ರೈಲ್ವೆ ಹಳಿ ದಾಟಲು ಪಾದಚಾರಿ ಸೇತುವೆ ನಿರ್ಮಾಣ ಮಾಡಬೇಕು’ ಎಂದು ಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್ ಒತ್ತಾಯಿಸಿದ್ದಾರೆ.

ಗುರುವಾರ ಬೆಳಿಗ್ಗೆ ಉಪ್ಪಾರಹಳ್ಳಿ ರೈಲ್ವೆ ಕೆಳ ಸೇತುವೆ ಬಳಿ ಆ ಭಾಗದ ಸಾರ್ವಜನಿಕರ ಸಮಸ್ಯೆ ಆಲಿಸಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.

‘ರೈಲ್ವೆ ನಿಲ್ದಾಣ ರಸ್ತೆಗೆ ಡಾಂಬರು ಹಾಕಿ ಹತ್ತಾರು ವರ್ಷಗಳೇ ಕಳೆದಿದೆ. ಹಲವು ಬಾರಿ ಮನವಿ ಮಾಡಿದ ನಂತರ ಲೋಕಸಭಾ ಚುನಾವಣೆಗೂ ಮೊದಲು ರಸ್ತೆಯ ವಿಸ್ತರಣೆಗೆ ಸಂಸದರು ಮತ್ತು ಶಾಸಕರು ಭೂಮಿಪೂಜೆ ನೆರವೇರಿಸಿದ್ದರು. ಆದರೆ, ಇದುವರೆಗೂ ಕೆಲಸ ಆರಂಭವಾಗಿಲ್ಲ’ ಎಂದರು.

ADVERTISEMENT

’ರಸ್ತೆಯಲ್ಲಿ ಸಂಚರಿಸುವ ಜನರು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಹೋಗಬೇಕಾಗಿದೆ. ಅಲ್ಲದೇ ಕೆಲ ತಿಂಗಳ ಹಿಂದೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ನಿರ್ಮಿಸಿದ್ದ ಒಳಚರಂಡಿ ವ್ಯವಸ್ಥೆಯೂ ಹಾಳಾಗಿದೆ. ಲಕ್ಷಾಂತರ ಹಣ ಖರ್ಚಾದರೂ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದರು.

ಕಸವಿಲೇವಾರಿ ಘಟಕ ಸ್ಥಳಾಂತರಿಸಿ

‘ಉಪ್ಪಾರಹಳ್ಳಿ ರೈಲ್ವೆ ಕೆಳಸೇತುವೆ ಮತ್ತು ಮೇಲ್ಸೇತುವೆ ಬಳಿ ಪಾಲಿಕೆಯ ಕಸ ವಿಲೇವಾರಿ ಘಟಕವಿದ್ದು, ಸುಮಾರು ಐದಾರು ವಾರ್ಡುಗಳ ಮನೆಗಳಿಂದ ಸಂಗ್ರಹಿಸಿದ ಕಸವನ್ನು ಜಾಗದಲ್ಲಿ ಸಂಗ್ರಹಿಸಲಾಗುತ್ತದೆ. ಬಳಿಕ ಒಣ ಮತ್ತು ಹಸಿ ಕಸ ವಿಂಗಡಿಸಲಾಗುತ್ತದೆ. ಹಸಿ ಕಸ ಕೊಳೆತು ದುರ್ವಾಸನೆ ಹೆಚ್ಚಾಗಿದ್ದು, ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ’ ಎಂದು ವಿವರಿಸಿದ್ದಾರೆ.

‘ಒಣ ಕಸವಾದ ಪ್ಲಾಸ್ಟಿಕ್ ಮತ್ತಿತರ ವಸ್ತುಗಳು ಗಾಳಿಯಲ್ಲಿ ಚೆಲ್ಲಾಪಿಲ್ಲಿ ಯಾಗಿ ಚರಂಡಿ ಸೇರುತ್ತಿವೆ. ಇದರಿಂದ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಆದ್ದರಿಂದ ಕೂಡಲೇ ಕಸವಿಲೇವಾರಿ ಘಟಕವನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು’ ಎಂದು ಪಾಲಿಕೆಗೆ ಒತ್ತಾಯಿಸಿದರು.


‘ಅದೇ ರೀತಿ ಸಾರ್ವಜನಿಕರ ಒತ್ತಾಯದ ಮೇರೆಗೆ ರೈಲ್ವೆ ಇಲಾಖೆಯು ಚಿಕ್ಕದಾದ ಕೆಳ ಸೇತುವೆ ನಿರ್ಮಿಸಿದೆ. ಆದರೆ, ಅಂಡರ್‌ಪಾಸ್‌ನಿಂದ ದ್ವಿಚಕ್ರ ಮತ್ತು ಆಟೋಗಳ ಓಡಾಟಕ್ಕೆ ಅನುಕೂಲವಾಗಿರುವುದನ್ನು ಬಿಟ್ಟರೆ, ಪಾದಚಾರಿಗಳಿಗೆ ಅನುಕೂಲವಾಗಿಲ್ಲ. ಇರುವ ಚಿಕ್ಕ ಜಾಗದಲ್ಲಿ ಎರಡು ಕಡೆಯಿಂದ ಬರುವ ವಾಹನಗಳು ಓಡಾಡುವುದರಿಂದ ಪಾದಚಾರಿಗಳು ಕೆಳ ಸೇತುವೆಯಲ್ಲಿ ಸಂಚರಿಸಲು ಭಯಪಡುವಂತಾಗಿದೆ’ ಎಂದು ಸಮಸ್ಯೆ ವಿವರಿಸಿದ್ದಾರೆ.

‘ಉಪ್ಪಾರಹಳ್ಳಿ,ವಿಜಯನಗರ,ಶಾಂತಿನಗರ,ಶಿವಮೂಕಾಂಬಿಕ ನಗರ, ಗೆದ್ದಲಹಳ್ಳಿ ರಸ್ತೆಯ ಇಕ್ಕೆಲಗಳ ಜನರು ಸರಾಗವಾಗಿ ರಸ್ತೆ ಹಳಿ ದಾಟುವಂತಾಗಲು ಈ ಜಾಗದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಒಂದು ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.